2024ರ ಚುನಾವಣೆಗೂ ಮುನ್ನ ಏಕರೂಪ ನಾಗರಿಕ ಸಂಹಿತೆ ಜಾರಿ?.. ಗೃಹ ಸಚಿವ ಅಮಿತ್​ ಶಾ ಪ್ಲಾನ್​ ಏನು?

author img

By

Published : May 3, 2022, 4:08 PM IST

common-civil-code

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆ ಜಾರಿಯ ಪರ ಮಾತನಾಡುತ್ತಿದ್ದು, ಗೃಹ ಸಚಿವ ಅಮಿತ್​ ಶಾ ಅವರು ಭೋಪಾಲ್​ ಭೇಟಿ ವೇಳೆಯೂ ಈ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ. ಇದು 2024ರ ಚುನಾವಣೆಗೂ ಮುನ್ನ ಸಂಹಿತೆ ಕೇಂದ್ರ ಸರ್ಕಾರ ಜಾರಿ ಮಾಡುವ ಉದ್ದೇಶ ಹೊಂದಿದೆ ಎಂಬುದರ ದ್ಯೋತಕವಾಗಿದೆ.

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೋಪಾಲ್ ಭೇಟಿಯ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಸುಳಿವು ನೀಡಿದ ನಂತರ, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಏಕರೂಪ ನಾಗರಿಕ ಸಂಹಿತೆಯ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಬಹುಶಃ 2024 ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ನಾಗರಿಕ ಸಂಹಿತೆ ಜಾರಿ ಮಾಡುವ ಉದ್ದೇಶ ಹೊಂದಿದೆ ಎಂಬ ಚರ್ಚೆ ಶುರುವಾಗಿದೆ.

ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೇ ಚುನಾವಣೆ ನಡೆದ ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ ಘೋಷಿಸಿದ್ದಾರೆ. ಸಂಹಿತೆ ಜಾರಿ ಮಾಡಲು ಘೋಷಿಸಿದ ಮೊದಲ ಮುಖ್ಯಮಂತ್ರಿಯಾಗಿ ಧಾಮಿ ಆಗಿದ್ದಾರೆ. ಅಲ್ಲದೇ, ಈ ಉದ್ದೇಶಕ್ಕಾಗಿ ಸಮಿತಿಯನ್ನೂ ರಚನೆ ಮಾಡಲಾಗಿದೆ. ಇದಲ್ಲದೇ, ನೆರೆಯ ರಾಜ್ಯವಾದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯದ ಕುರಿತು ಚರ್ಚಿಸಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಸಿವಿಲ್​ ಕೋಡ್ ಪರ ಹೆಚ್ಚಿದ ಕೂಗು: ಉತ್ತರ ಪ್ರದೇಶದ ಚುನಾವಣೆಯ ನಂತರ ದೇಶದ ಎಲ್ಲ ರಾಜ್ಯಗಳಲ್ಲಿ ಏಕರೂಪ ಕಾನೂನು ಜಾರಿಯಾಗಬೇಕು ಎಂಬ ಕೂಗು ಜೋರಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪ್ರಗತಿಪರ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಪರ ಮಾತನಾಡಿದ್ದರು. ಇದಲ್ಲದೇ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೂಡ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದ್ದರು.

ಮತ್ತೊಂದೆಡೆ, ಗೋವಾ ಮಾತ್ರ 1961 ರಿಂದ ಕಾಮನ್ ಸಿವಿಲ್ ಕೋಡ್ ಜಾರಿಯಲ್ಲಿರುವ ಏಕೈಕ ಬಿಜೆಪಿ ಆಡಳಿತದ ರಾಜ್ಯವಾಗಿದೆ. ಪೋರ್ಚುಗೀಸ್ ಆಳ್ವಿಕೆಯಲ್ಲಿ 1961 ಕ್ಕಿಂತ ಮುಂಚೆಯೇ ಸಿವಿಲ್​ ಕೋಡ್​ ಅನ್ನು ಜಾರಿಗೆ ತರಲಾಯಿತು. ಕಾಮನ್ ಸಿವಿಲ್ ಕೋಡ್ ಅನುಷ್ಠಾನದ ನಂತರ ಅದು ವಿವಿಧ ಧರ್ಮಾಧಾರಿತ ಸಮುದಾಯಗಳ ಮೇಲೆ ಅನ್ವಯಿಸುತ್ತದೆ. ಮದುವೆಗೆ ಸಂಬಂಧಿಸಿದಂತೆ ಹೊಸ ಕಾನೂನು, ವಿಚ್ಛೇದನ, ಉತ್ತರಾಧಿಕಾರ, ದತ್ತು ಸೇರಿದಂತೆ ವಿವಿಧ ವಿಷಯಗಳ ಮೇಲೆ ಅದು ಕಾರ್ಯನಿರ್ವಹಿಸುತ್ತದೆ.

ಸಂವಿಧಾನದಲ್ಲೂ ಕೋಡ್​ ಪ್ರಸ್ತಾಪ: ಭಾರತೀಯ ಸಂವಿಧಾನದ 44 ನೇ ವಿಧಿಯೂ ಏಕರೂಪ ಕಾನೂನಿನ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕಾನೂನು ದೇಶದ ಎಲ್ಲ ಧರ್ಮಗಳಿಗೆ ಸೇರಿದ ಜನರಿಗೆ ಅನ್ವಯಿಸಬೇಕು ಎಂದೂ ಹೇಳುತ್ತದೆ. ಇದೀಗ ಬಿಜೆಪಿ ನೇತೃತ್ವದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ಪ್ರಾರಂಭವಾದ ಸಾಮಾನ್ಯ ನಾಗರಿಕ ಸಂಹಿತೆಯ ಜಾರಿ ಚರ್ಚೆಯು ಕೇವಲ ರಾಜಕೀಯಕ್ಕಾಗಿಯೋ ಅಥವಾ 2024 ರ ಚುನಾವಣೆಯ ಪೂರ್ವಭಾವಿ ಸಿದ್ಧತೆಗೆಗಾಗಿ ಮಾತ್ರ ಮುನ್ನೆಲೆಗೆ ಬಂದಿದೆಯೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಬಿಜೆಪಿ ತನ್ನ ಕಾರ್ಯಸೂಚಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಅಳವಡಿಸಿಕೊಂಡಿದೆ. 370ನೇ ವಿಧಿ ರದ್ದತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಏಕ ಕಾಲದಲ್ಲಿ ಚುನಾವಣೆ ಪ್ರಸ್ತಾಪವು ಸಿವಿಲ್​ ಕೋಡ್​ ಜಾರಿಯ ಬಗ್ಗೆ ಸಾಕಷ್ಟು ಸುಳಿವುಗಳನ್ನು ನೀಡುತ್ತಿದೆ. ಇದಲ್ಲದೇ, 2024ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ಈಗಲೇ ತಳಹದಿ ಶುರುವಿಟ್ಟುಕೊಂಡಿದೆ ಎಂದು ಊಹಿಸಲಾಗಿದೆ.

ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾರಿ: ಕಾಮನ್ ಸಿವಿಲ್ ಕೋಡ್ ಮತ್ತು ರಾಮಮಂದಿರ ನಿರ್ಮಾಣವು 2024 ರ ಲೋಕಸಭಾ ಚುನಾವಣೆಯ ಮೇಲೆ ಬೆಳಕು ಚೆಲ್ಲುತ್ತದೆ. ಕೇಂದ್ರ ಸರ್ಕಾರ ಚುನಾವಣೆಗೂ ಮುನ್ನ ಸಿವಿಲ್​ ಕೋಡ್​ ಅನ್ನು ದೇಶದಲ್ಲಿ ಜಾರಿಗೊಳಿಸುವ ಸಾಧ್ಯತೆಯಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಇದು ಅನ್ಯಮತೀಯ ಧರ್ಮಗಳ ವಿರುದ್ಧ ನಡೆದುಕೊಳ್ಳಲಿದೆ ಎಂಬ ಭಾವನೆ ಉಂಟು ಮಾಡಲಾಗಿದೆ.

ಆದರೆ, ವಾಸ್ತವವಾಗಿ ಅದು ತಪ್ಪು ಎಂದು ಬಿಜೆಪಿ ನಾಯಕರ ಸ್ಪಷ್ಟನೆ. ಸಿವಿಲ್ ಕೋಡ್ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿದೆ ಎಂದು ವಿನಾಕಾರಣ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕಾಮನ್ ಸಿವಿಲ್ ಕೋಡ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧವಾಗುವುದಿಲ್ಲ. ಆದ್ದರಿಂದ, ಅನ್ಯಮತೀಯರು ಹೊಸ ಸಂಹಿತೆಯ ಸೂಕ್ಷ್ಮ ಅಂಶಗಳನ್ನು ಗ್ರಹಿಸಬೇಕು. ಪ್ರತಿಭಟನೆಯ ಹಾದಿಯನ್ನು ಹಿಡಿಯುವ ಬದಲು ವಾಸ್ತವಿಕತೆಯನ್ನು ಅರಿಯಬೇಕಾಗಿದೆ.

ಇದು ಹೊಸ ವಿಷಯವಲ್ಲ: ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ ಬಿಜೆಪಿ ನಾಯಕ ಮುರಳೀಧರ್ ರಾವ್, ಕಾಮನ್ ಸಿವಿಲ್ ಕೋಡ್ ಪಕ್ಷಕ್ಕೆ ಹೊಸ ವಿಷಯವಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗಲೂ ಈ ವಿಷಯ ಪ್ರಸ್ತಾಪಿಸುತ್ತಲೇ ಬಂದಿದ್ದೇವೆ. ಇದು ಪಕ್ಷದ ಪ್ರಣಾಳಿಕೆಯಲ್ಲೂ ಇದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು 370 ನೇ ವಿಧಿಯನ್ನು ರದ್ದುಪಡಿಸುವುದರ ಮೂಲಕ ಹಿಂಪಡೆದಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗಿದ್ದನ್ನು ನೋಡಿದರೆ 2024ರ ಚುನಾವಣೆಗೂ ಮುನ್ನ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.

ಓದಿ: ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಅವತಾರ; ಸಾಗಬೇಕಾದ ಹಾದಿ ಇನ್ನೂ ದೂರ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.