ಅಸ್ಸಾಂ ಸಿಎಂಗೆ ಶಾರುಖ್‌ ಖಾನ್‌ ಕರೆ; ಪಠಾಣ್‌ ಪ್ರದರ್ಶನಕ್ಕೆ ಬೆಂಬಲ ನೀಡಿದ ಹಿಮಂತ ಬಿಸ್ವಾ

author img

By

Published : Jan 22, 2023, 1:20 PM IST

Pathan Controversy

ಅಸ್ಸೋಂನಲ್ಲಿ ಪಠಾಣ್​ ಪ್ರದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶಾರುಖ್​ ಖಾನ್‌ಗೆ ಭರವಸೆ ನೀಡಿದ್ದಾರೆ.

ಗುವಾಹಟಿ (ಅಸ್ಸೋಂ): ಬಾಲಿವುಡ್​ನ ಬಹು ನಿರೀಕ್ಷಿತ ಸಿನಿಮಾ ಪಠಾಣ್​ ಬಿಡುಗಡೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಬೇಶರಂ ರಂಗ್​ ಹಾಡಿನ ಹಿನ್ನೆಲೆಯಲ್ಲಿ ಭುಗಿಲೆದ್ದ ಆಕ್ರೋಶ ಇನ್ನೂ ಹಲವೆಡೆ ಮುಂದುವರಿದಿದೆ. ಅಸ್ಸೋಂ ರಾಜ್ಯದಲ್ಲಿ ಪಠಾಣ್​ ವಿರುದ್ಧ ಪ್ರತಿಭಟನೆ ನಡೆದಿತ್ತು. ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದು, "ಶಾರುಖ್ ಖಾನ್ ಯಾರು?" ಎಂದು ಪ್ರಶ್ನಿಸಿದ್ದರು. ಈ ಬೆಳವಣಿಗೆಯ ಬಳಿಕ ಅಸ್ಸೋಂ ಸಿಎಂ ಇದೀಗ ಪಠಾಣ್​ ಪ್ರದರ್ಶನಕ್ಕೆ ಬೆಂಬಲ ಸೂಚಿಸಿದ್ದಾರೆ. ಸೂಪರ್​ ಸ್ಟಾರ್ ಶಾರುಖ್​ ಖಾನ್​ ರಾತ್ರೋರಾತ್ರಿ ಅಸ್ಸೋಂ ಮುಖ್ಯಮಂತ್ರಿಗೆ ಕರೆ ಮಾಡಿದ್ದೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಅಸ್ಸೋಂ ಸಿಎಂಗೆ ಶಾರುಖ್​ ಕರೆ: "ಶಾರುಖ್ ಖಾನ್ ಯಾರು?" ಎಂದು ಹಿಮಂತ ಬಿಸ್ವಾ ಶರ್ಮಾ ಅವರು ಬಾಲಿವುಡ್ ಬಾದ್‌ಶಾ ಅವರನ್ನು ಖಂಡಿಸಿದ ಒಂದು ದಿನದ ನಂತರ, ನಟ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಲು ಮುಖ್ಯಮಂತ್ರಿ ಅವರಿಗೆ ಕರೆ ಮಾಡಿದ್ದರು. ತಮ್ಮ ಚಿತ್ರದ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾರುಖ್​ ಖಾನ್ ಅವರಿಗೆ ಸಿಎಂ ಭರವಸೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಇಂದು ಬೆಳಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  • Bollywood actor Shri @iamsrk called me and we talked today morning at 2 am. He expressed concern about an incident in Guwahati during screening of his film. I assured him that it’s duty of state govt to maintain law & order. We’ll enquire and ensure no such untoward incidents.

    — Himanta Biswa Sarma (@himantabiswa) January 22, 2023 " class="align-text-top noRightClick twitterSection" data=" ">

ಹಿಮಂತ ಬಿಸ್ವಾ ಶರ್ಮಾ ಟ್ವೀಟ್: "ಬಾಲಿವುಡ್ ನಟ ಶಾರುಖ್​ ಖಾನ್​ ಅವರು ನನಗೆ ಕರೆ ಮಾಡಿದರು. ನಾವು ಇಂದು ಬೆಳಗಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ಅವರು ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ನಾವು ವಿಚಾರಣೆ ನಡೆಸುತ್ತೇವೆ ಮತ್ತು ಇಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ" ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಪಠಾಣ್​ ವಿರುದ್ಧ ಪ್ರತಿಭಟನೆ: ಶುಕ್ರವಾರ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಸಿನಿಮಾ ಪ್ರದರ್ಶನಗೊಳ್ಳಲಿರುವ ನರೇಂಗಿಯ ಥಿಯೇಟರ್‌ಗೆ ಕೆಲ ಬಜರಂಗದಳ ಕಾರ್ಯಕರ್ತರು ನುಗ್ಗಿದ್ದರು. ಕಾರ್ಯಕರ್ತರು ಚಿತ್ರದ ಪೋಸ್ಟರ್‌ಗಳನ್ನು ಹರಿದು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಘಟನೆಯ ಕುರಿತು ತಮ್ಮನ್ನು ಪ್ರಶ್ನಿಸಿದ ಸುದ್ದಿಗಾರರನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡಿದ್ದರು. ''ಶಾರುಖ್ ಖಾನ್ ಯಾರು? ಅವರ ಬಗ್ಗೆ ಅಥವಾ ಪಠಾಣ್ ಚಿತ್ರದ ಬಗ್ಗೆ ನನಗೆ ಏನೂ ತಿಳಿದಿಲ್ಲ'' ಎಂದಿದ್ದರು. ಅದಕ್ಕೆ, ಶಾರುಖ್​​ ಖಾನ್ ಅವರು ಬಾಲಿವುಡ್ ಸೂಪರ್‌ಸ್ಟಾರ್ ಎಂದು ಸುದ್ದಿಗಾರರು ತಿಳಿಸಿದಾಗ ಅಸ್ಸಾಂನ ಜನರು ಅಸ್ಸಾಮಿಗಳ (ಅಸ್ಸಾಮಿ ಸಿನಿಮಾ) ಬಗ್ಗೆ ಕಾಳಜಿ ವಹಿಸಬೇಕು, ಹಿಂದಿ ಚಿತ್ರಗಳ ಬಗ್ಗೆ ಅಲ್ಲ ಎಂದು ಸಿಎಂ ಶರ್ಮಾ ಕಿಡಿ ಕಾರಿದ್ದರು.

ಇದನ್ನೂ ಓದಿ: ರಿಲೀಸ್​ಗೂ ಮುನ್ನ ಪಠಾಣ್​ ದಾಖಲೆ: ಒಂದೇ ದಿನದಲ್ಲಿ 15 ಕೋಟಿ ರೂ. ವ್ಯವಹಾರ!

ಶಾರುಖ್​ ಕರೆ ಮಾಡಿದರೆ ಸಮಸ್ಯೆ ಪರಿಶೀಲನೆ: ''ಬಾಲಿವುಡ್‌ ಚಿತ್ರರಂಗದ ಹಲವರು ಕೆಲ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಫೋನ್ ಮಾಡಿದ್ದು, ಶಾರುಖ್​ ಖಾನ್ ಮಾತ್ರ ನನಗೆ ಕರೆ ಮಾಡಿಲ್ಲ. ಅವರು ಕರೆ ಮಾಡಿದರೆ, ನಾನು ಈ ವಿಷಯವನ್ನು ಪರಿಶೀಲಿಸುತ್ತೇನೆ. ಕಾನೂನು ಸುವ್ಯವಸ್ಥೆ ಉಲ್ಲಂಘಿಸಿ ಪ್ರಕರಣ ದಾಖಲಾದರೆ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದರು.

ಇದನ್ನೂ ಓದಿ: ಪಠಾಣ್​ ಬಿಡುಗಡೆಗೆ ದಿನಗಣನೆ: ಥಿಯೇಟರ್​ನ ಸಂಪೂರ್ಣ ಟಿಕೆಟ್ ಖರೀದಿಸಿದ ಶಾರುಖ್​​ ಅಭಿಮಾನಿಗಳ ಸಂಘ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.