Year Ender 2021: ಈ ವರ್ಷ ಮೈಸೂರಿನಲ್ಲಿ ಸದ್ದು ಮಾಡಿದ ಘಟನಾವಳಿಗಳ ಹಿನ್ನೋಟ

author img

By

Published : Dec 30, 2021, 7:07 PM IST

Updated : Dec 30, 2021, 7:36 PM IST

year ender report of mysore

ಈ ವರ್ಷ ಸಾಂಸ್ಕೃತಿಕ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ ಇಲ್ಲಿದೆ.

ಮೈಸೂರು: ಹೊಸ ವರ್ಷ 2022ಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ ವರ್ಷ ಸಾಂಸ್ಕೃತಿಕ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ ಇಲ್ಲಿದೆ.

ರಾಜಕೀಯ ಘಟನೆಗಳು:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ‌. ದೇವೆಗೌಡ ಕಳೆದ ಚುನಾವಣೆಯಲ್ಲಿ ಬದ್ದ ವೈರಿಗಳಾಗಿ ಚುನಾವಣೆ ಎದುರಿಸಿದ್ದರು. ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲು ಅನುಭವಿಸಿದ್ದರು. ಆನಂತರ ಚಾಮುಂಡೇಶ್ವರಿ ಕ್ಷೇತ್ರದ ಕಡೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈ ವರ್ಷ ಕಾರ್ಯಕ್ರಮ ಒಂದರಲ್ಲಿ ಸಿದ್ದು ಮತ್ತು ಜಿ.ಟಿ.ದೇವೇಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೈಸೂರು ಮತ್ತು ಚಾಮರಾಜನಗರ ದ್ವಿ ಸದಸ್ಯ ಸ್ಥಾನಕ್ಕೆ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​ನ ಡಾ.ಡಿ. ತಿಮ್ಮಯ್ಯ ಹಾಗೂ ಜೆಡಿಎಸ್​ನ ಸಿ.ಎನ್‌. ಮಂಜೇಗೌಡ ಜಯ ಸಾಧಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಕೌಟಿಲ್ಯ ರಘುಗೆ ಸೋಲುಂಟಾಯಿತು.

ಇನ್ನು ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಅವಕಾಶ ವಂಚಿತರಾಗಿದ್ದ ಸುನಂದ ಪಾಲನೇತ್ರ ಈ ಬಾರಿ ಮೇಯರ್ ಆಗಿ ಆಯ್ಕೆಯಾದರು. ಇದರ ಜೊತೆಗೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಸಾ‌.ರಾ.ಮಹೇಶ್ ನಡುವೆ ನಡೆದ ಜಟಾಪಟಿಯ ಮಧ್ಯೆ ಅಂದು ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪನಾಗ್ ನಡುವೆಯು ಜಟಾಪಟಿ ನಡೆಯಿತು. ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ನಿಯಮ ಉಲ್ಲಂಘಿಸಿ ಈಜುಕೊಳ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪವು ಈ ವರ್ಷ ಅತಿ ಹೆಚ್ಚು ಸುದ್ದಿಯಾಗಿತ್ತು.

ಅಪರಾಧ ಪ್ರಕರಣಗಳ ವಿವರ:

ಈ ವರ್ಷ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡ ಪ್ರದೇಶದಲ್ಲಿ ಆಗಸ್ಟ್ 25 ರಂದು ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂಬಂಧ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದರ ಜೊತೆಗೆ ವಿದ್ಯಾರಣ್ಯಪುರಂ ಚಿನ್ನದ ಅಂಗಡಿಯಲ್ಲಾದ ದರೋಡೆ ಪ್ರಕರಣದಲ್ಲಿ ಪೊಲೀಸರು ಉತ್ತರ ಭಾರತದ ಕಡೆ ಹೋಗಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ನಟ ದರ್ಶನ್ ಮೈಸೂರು ಹೋಟೆಲ್ ಒಂದರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ಮಧ್ಯೆ ಮಾತಿನ ಸಮರವಾಗಿತ್ತು. ದರ್ಶನ್ ಹೆಸರನ್ನು ಉಪಯೋಗಿಸಿಕೊಂಡು ಅರುಣಾ ಕುಮಾರಿ ಎಂಬುವವರು 25 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಕಲಿ ನಂದಿನಿ ತುಪ್ಪ ತಯಾರಿಕ ಘಟಕ ಪತ್ತೆ:

ಇನ್ನೂ ವರ್ಷದ ಕೊನೆಯಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕ ಘಟಕ ಪತ್ತೆಯಾಗಿದ್ದು, ಹತ್ತು ಟನ್ ನಕಲಿ ತುಪ್ಪ ವಶಪಡಿಸಿಕೊಳ್ಳಲಾಗಿತ್ತು. ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಸರಳವಾಗಿ ನಡೆದ ದಸರಾ:

ಪ್ರವಾಸೋದ್ಯಕ್ಕೆ ಹೆಸರುವಾಸಿಯಾಗಿರುವ ಮೈಸೂರು ನಗರದಲ್ಲಿ ಈ ಬಾರಿ ಕೋವಿಡ್ ಕಾರಣದಿಂದ ಪ್ರವಾಸೋದ್ಯಮ ನೆಲ ಕಚ್ಚಿತ್ತು. ಕೋವಿಡ್​ ಹಿನ್ನೆಲೆ, ಸರಳ ಹಾಗೂ ಸಾಂಪ್ರದಾಯಿಕವಾಗಿ ನಾಡ ಹಬ್ಬ ದಸಾರವನ್ನು ಆಚರಿಸಲಾಯಿತು.

ಈ ಬಾರಿಯ ನಾಡ ಹಬ್ಬವನ್ನು ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ಉದ್ಘಾಟನೆ ಮಾಡಿದ್ದು, ಅರಮನೆ ಒಳಗಡೆ ಜಂಬೂ ಸವಾರಿ ನಡೆಯಿತು. ಇನ್ನೂ ಅರಮನೆಯಲ್ಲಿ ರಾಜ ಪರಂಪರೆಯಂತೆ ನವರಾತ್ರಿಯ ಧಾರ್ಮಿಕ ಪೂಜಾ ಕಾರ್ಯಗಳನ್ನು ಮಹರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನೆರವೇರಿಸಿದರು.

ಬಾರಿ ಮಳೆಗೆ ಚಾಮುಂಡಿ ಬೆಟ್ಟದ ರಸ್ತೆ ಕುಸಿತ:

ಆಕ್ಟೋಬರ್ ಮತ್ತು ನವಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ದಾಖಲೆ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆಗಳು ನಷ್ಟವಾಗಿದ್ದವು. ಇದರ ಜೊತೆಗೆ ವಿಶ್ವ ಪ್ರಸಿದ್ಧ ಚಾಮುಂಡಿ ಬೆಟ್ಟದ ನಂದಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಆ ಮಾರ್ಗದ ಸಂಚಾರವನ್ನು ಬಂದ್ ಮಾಡಲಾಗಿದೆ.

ಸಂಶೋಧನೆಗಳು:

ಮೈಸೂರು ನಗರದಲ್ಲಿ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗೆ ವರ್ಷದ ಆರಂಭದಲ್ಲೇ ಮೊದಲ ಮಹಿಳಾ ನಿರ್ದೇಶಕಿಯಾಗಿ ಡಾ ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕವಾದರು. ಆದಾದ ನಂತರ ಸಿ.ಎಫ್.ಆರ್. ಐ ನ ವಿಜ್ಞಾನಿಯಾಗಿರುವ ಪುಷ್ಪ ಎಸ್ ಮೂರ್ತಿ ಕಾಫಿ ಎಲೆಯಿಂದ ಪಾನೀಯ ತಯಾರಿಸುವ ಸಂಶೋಧನೆ ನಡೆಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Year Ender 2021: ರಾಜ್ಯವನ್ನು ಬೆಚ್ಚಿ ಬೀಳಿಸಿದ ರಾಜಧಾನಿಯ ಅಪರಾಧ, ಅಪಘಾತ ಪ್ರಕರಣಗಳ ಹಿನ್ನೋಟ

ನಗರದಲ್ಲಿ ಇರುವ ಡಿಎಫ್ಆರ್​ಎಲ್ ಗಗನ ಯಾತ್ರಿಗಳಿಗೆ ವಿಶೇಷ ಆಹಾರ ತಯಾರಿಸಿದ್ದಾರೆ. ಜೊತೆಗೆ ಕೋವಿಡ್ ನಿಂದ ರಕ್ಷಿಸಿಕೊಳ್ಳಲು ವಿಶೇಷ ಮಾಸ್ಕ್ ಸೇರಿದಂತೆ ಹಲವು ಮಹತ್ವದ ಸಂಶೋಧನೆಗಳು 2021 ರಲ್ಲಿ ಮಾಡಲಾಗಿದೆ.

Last Updated :Dec 30, 2021, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.