ಮೈಸೂರು: ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿ, ಜೀವಂತ ಹೂತು ಹಾಕಿದ ಸ್ನೇಹಿತರು

author img

By

Published : Dec 1, 2021, 9:45 AM IST

person-assaulted-and-burying-alive-by-friend-in-mysuru

ಸ್ನೇಹಿತನನ್ನು ಜೀವಂತ ಸಮಾಧಿ ಮಾಡಿದ ಗಂಭೀರ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮೈಸೂರು: ಮದ್ಯದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ಸ್ನೇಹಿತರೇ ಮತ್ತೊಬ್ಬ ಸ್ನೇಹಿತನ‌ನ್ನು ಹಲ್ಲೆ ಮಾಡಿ, ಜೀವಂತ ಸಮಾಧಿ ಮಾಡಿರುವ ಘಟನೆ ಹುಣಸೂರು ತಾಲೂಕಿನ ಹನಗೋಡಿನ ಬಿಬಿಸಿ ಕಾಲೋನಿಯಲ್ಲಿ ನಡೆದಿದೆ.

ಕೃಷ್ಣ (33) ಕೊಲೆಯಾದ ವ್ಯಕ್ತಿ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿ, ಹೂತಿದ್ದ ಶವ ಹೊರ ತೆಗೆದಿದ್ದಾರೆ.

ಆಗಿದ್ದೇನು?:

ಕಳೆದ ಮೂರು ದಿನಗಳ ಹಿಂದೆ ಕೃಷ್ಣನಿಗೆ ಆತನ ಸ್ನೇಹಿತರಾದ ಗೋಪಾಲ ಮತ್ತು ಅಶೋಕ ಕರೆ ಮಾಡಿ ಹೊಸೂರಿನ ಮಾರಮ್ಮನ ದೇವಸ್ಥಾನದ ಬಳಿ ಬರುವಂತೆ ತಿಳಿಸಿದ್ದಾರೆ. ಆತ ಅಲ್ಲಿಗೆ ಹೋದಾಗ ಮೂವರು ಮದ್ಯಪಾನ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಅಶೋಕ ಮತ್ತು ಗೋಪಾಲ ಸೇರಿ ಕೃಷ್ಣನ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ಕೃಷ್ಣನನ್ನು ಪಕ್ಕದಲ್ಲೇ ನಿಂತಿದ್ದ ಜೆಸಿಬಿ ಯಂತ್ರದಿಂದ ಗುಂಡಿ ತೋಡಿ ಕೃಷ್ಣನನ್ನು ಜೀವಂತವಾಗಿಯೇ ಹೂತು ಹಾಕಿದ್ದಾರೆ.

ಮರುದಿನ ಬೆಳಗ್ಗೆಯಾದರೂ ಪತಿ ಮನೆಗೆ ಬಾರದೇ ಇದ್ದುದರಿಂದ ಕೃಷ್ಣನ ಹೆಂಡತಿ ಮಲ್ಲಿಗೆ, ಗ್ರಾಮ ಪಂಚಾಯಿತಿ ಸದಸ್ಯನಾದ ಆತನ ಚಿಕ್ಕಪ್ಪ ರಾಮಕೃಷ್ಣ ಇಬ್ಬರೂ ಸ್ನೇಹಿತರಾದ ಅಶೋಕ ಹಾಗೂ ಗೋಪಾಲನ ಬಳಿ ಧಾವಿಸಿ ವಿಚಾರಿಸಿದ್ದಾರೆ. ರಾತ್ರಿಯೇ ಆತ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದಾನೆಂದು ಅಶೋಕ ಮತ್ತು ಗೋಪಾಲ ತಿಳಿಸಿದ್ದು, ಇವರಿಬ್ಬರ ಮೇಲೆ ಅನುಮಾನಗೊಂಡ ಕೃಷ್ಣನ‌ ಕುಟುಂಬಸ್ಥರು ಗ್ರಾಮದಲ್ಲಿ ಪಂಚಾಯಿತಿ ಸೇರಿಸಿ, ವಿಚಾರಣೆ ಮಾಡಿದ್ದಾರೆ. ಆದರೂ ನಮಗೇನೂ ಗೊತ್ತಿಲ್ಲ ಎಂದೇ ವಾದಿಸಿದ್ದ ಅವರು ನಂತರ ಗ್ರಾಮದಿಂದ ಪರಾರಿಯಾಗಿದ್ದಾರೆ.

ಇದರಿಂದ ಅನುಮಾನಗೊಂಡ ಕೃಷ್ಣನ ಸಂಬಂಧಿಗಳು ಹುಣಸೂರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇನ್ಸ್​​ಪೆಕ್ಟರ್ ಚಿಕ್ಕಸ್ವಾಮಿ ನೇತೃತ್ವದ ತಂಡ ಮಂಡ್ಯ ಬಳಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃಷ್ಣನನ್ನು ಜೀವಂತ ಸಮಾಧಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಆರೋಪಿಗಳು ತೋರಿಸಿದ ಜಾಗದಲ್ಲಿ ಗುಂಡಿ ತೆಗೆದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಗಿದೆ. ಕೊಲೆಗೆ ಕಾರಣವವೇನು ಎಂಬುದು ವಿಚಾರಣೆ ಬಳಿಕ ತಿಳಿಯಬೇಕಿದ್ದು, ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಕಪಿಲಾ ನದಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.