ಮೈಸೂರು: ಮದುವೆಯಾಗಿ ಮಕ್ಕಳಿದ್ದ 35 ವರ್ಷದ ವಿವಾಹಿತೆಯೊಬ್ಬಳು 21 ವರ್ಷದ ಚಿಗುರು ಮೀಸೆಯ ಅರ್ಚಕನ ಜೊತೆ ಓಡಿ ಹೋಗಿದ್ದು, ಆಕೆಯೊಂದಿಗೆ 10 ದಿನ ಒಡನಾಟ ಬೆಳೆಸಿ ನಂತರ ಕಾಡಂಚಿನಲ್ಲಿ ಬಿಟ್ಟು ಯುವಕ ಪರಾರಿಯಾಗಿದ್ದ. ಅತಂತ್ರಳಾಗಿ ಕಾಡಿನಲ್ಲಿ ಸುತ್ತಾಡುತ್ತಿದ್ದ ಮಹಿಳೆ ಕೊನೆಗೂ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ನಡೆದಿದೆ.
ಕೊಲ್ಲುಪುರ ಗ್ರಾಮದ ಮಹಿಳೆಯೊಬ್ಬರಿಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಈಕೆಗೆ ಗ್ರಾಮದ ಮಹಾದೇಶ್ವರ ದೇವಸ್ಥಾನದ ಅರ್ಚಕ ಸಂತೋಷ್ ಎಂಬುವನ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಆಗೋಣ ಎಂದು ಮನೆ ಬಿಟ್ಟು ಜೂನ್ 12 ರಂದು ಹೊರಟುಹೋಗಿದ್ದರು. ಕುಟುಂಬಸ್ಥರು ಮಹಿಳೆಗಾಗಿ ಹುಡುಕಾಟ ನಡೆಸಿದ್ದರೂ ಎಲ್ಲೂ ಸುಳಿವು ಸಿಕ್ಕಿರಲಿಲ್ಲ.
10 ದಿನಗಳ ಕಾಲ ಮಹಿಳೆಯೊಂದಿಗೆ ಕಾಡಿನಲ್ಲಿ ಒಟ್ಟಿಗೆ ಸುತ್ತಾಡಿದ ಯುವ ಅರ್ಚಕ, ಕೊನೆಗೆ ಮದುವೆ ಬೇಡ ಎಂದು ಉಲ್ಟಾ ಹೊಡೆದಿದ್ದಾನೆ. ವಿವಾಹಿತೆ ತಾಳಿ ಕಟ್ಟು ಎಂದು ಕೇಳಿದರೂ ಒಪ್ಪದೇ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಂಬಿಸಿದ್ದಾನೆ. ಬಳಿಕ ಇಲ್ಲೇ ಇರು ಎಂದು ಕತ್ತಲೆಯಲ್ಲಿ ಮಹಿಳೆಯನ್ನು ಕೂರಿಸಿ ಹೋದ ಯುವಕ ನಾಪತ್ತೆಗಿದ್ದಾನೆ. ಆತನಿಗಾಗಿ ಕಾದು ಕುಳಿತ ಮಹಿಳೆ ಕತ್ತಲೆಯಲ್ಲೇ ಕಾಡಿನಲ್ಲಿ ದಿನ ಕಳೆದು ಕೊನೆಗೆ ಬೆಳಗಿನಜಾವ ಕಾಡಂಚಿನ ಗ್ರಾಮಕ್ಕೆ ನಡೆದುಕೊಂಡು ಬಂದು ಗ್ರಾಮಸ್ಥರಿಗೆ ತನ್ನ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಗ್ರಾಮಸ್ಥರು ಉಳ್ಳಲ್ಲಿ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ನಾಪತ್ತೆಯಾಗಿರುವ ಅರ್ಚಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಅಂತರ್ಜಾತಿ ವಿವಾಹ.. ಸತ್ತಾಗ ಮರುಗದ ಆ ಮನಸುಗಳು: ಸಹಾಯಕ್ಕೆ ನಿಂತ ಸ್ನೇಹಿತರು!