ಕೆಕೆಆರ್​​ಡಿಬಿ, ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಕೈಗೊಳ್ಳುತ್ತೇನೆ : ಸಿಎಂ ಬೊಮ್ಮಾಯಿ

author img

By

Published : Sep 17, 2021, 2:39 PM IST

cm basavaraja bommai

ಕೆಕೆಆರ್​ಡಿಬಿಗೆ ಮುಂದಿನ ಕೆಲ ದಿನಗಳಲ್ಲಿ ಪ್ರತ್ಯೇಕ ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಿಸಲಾಗುವುದು. 371(ಜೆ) ಕೋಶವನ್ನು ಬೆಂಗಳೂರಿನ ಡಿಪಿಆರ್‌ನಿಂದ ಬೇರ್ಪಡಿಸಿ ಕಲಬುರಗಿ ನಗರಕ್ಕೆ ಸ್ಥಳಾಂತರಿಸಲಾಗುವುದು. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವೇಗ ದೊರೆಯಲಿದೆ..

ಕಲಬುರಗಿ : ಪ್ರತಿ ಮೂರು ತಿಂಗಳಿಗೊಮ್ಮೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್​​ಡಿಬಿ ಹಾಗೂ ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಸ್ವತಃ ತಾವೇ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿರುವುದು..

ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ- 2021 ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 8,000 ಕೋಟಿ ರೂ. ಬಿಡುಗಡೆಯಾಗಿದೆ.

ಆದರೆ, ಆ ಪೈಕಿ ಇನ್ನೂ 2,000 ಕೋಟಿ ರೂ. ಖರ್ಚಾಗದೆ ಉಳಿದಿದೆ. ಈ ಉಳಿಕೆ ಹಣವನ್ನು ಮಾರ್ಚ್​​ ಅಂತ್ಯದೊಳಗೆ ಸರಿಯಾದ ದಿಕ್ಕಿನಲ್ಲಿ ಖರ್ಚು ಮಾಡಿ ತೋರಿಸಿದರೆ ಮಾರ್ಚ್​ ಬಳಿಕ 3,000 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ವರದಿ ಅನುಷ್ಠಾನದ ಮೌಲ್ಯಮಾಪನ : ಈವರೆಗೆ ನಂಜುಂಡಪ್ಪ ವರದಿ ಅನುಷ್ಠಾನ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದರ ಮೌಲ್ಯಮಾಪನ ಕೈಗೊಳ್ಳಲಾಗುವುದು. ಈ ಮೌಲ್ಯಮಾಪನದ ಬಳಿಕ ಪುನಃ ವರದಿ ಅನುಷ್ಠಾನವನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಕೆಕೆಆರ್​ಡಿಬಿಗೆ ಮುಂದಿನ ಕೆಲ ದಿನಗಳಲ್ಲಿ ಪ್ರತ್ಯೇಕ ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಿಸಲಾಗುವುದು. 371(ಜೆ) ಕೋಶವನ್ನು ಬೆಂಗಳೂರಿನ ಡಿಪಿಆರ್‌ನಿಂದ ಬೇರ್ಪಡಿಸಿ ಕಲಬುರಗಿ ನಗರಕ್ಕೆ ಸ್ಥಳಾಂತರಿಸಲಾಗುವುದು. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಾಕಿಯಿರುವ ಯೋಜನೆಗೆಳನ್ನು ಪೂರ್ಣಗೊಳಿಸಲಾಗುವುದು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹು ದಿನಗಳಿಂದ ಬಾಕಿ ಉಳಿದಿರುವ ಕೃಷಿ ಹಾಗೂ ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು. ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳನ್ನು ಸಹ ಆದಷ್ಟು ಬೇಗ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು : ಮುಂಬರುವ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆಗೂ ಸಮರ್ಪಕ ಅನುದಾನ ಕೊಟ್ಟು, ಆ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಜಿಲ್ಲೆಯ 1,000 ಸಾವಿರ ಎಕರೆ ಪ್ರದೇಶದಲ್ಲಿ ಟೆಕ್ಸ್ ಟೈಲ್ ಪಾಕ್೯ ಮಂಜೂರಾಗಿದೆ. ಇಂದು ರಾತ್ರಿ ಕೇಂದ್ರ ಜವಳಿ ಖಾತೆ ಸಚಿವ ಪಿಯೂಷ್ ಗೋಯಲ್ ಅವರನ್ನು ತಾವು ಖುದ್ದು ಭೇಟಿ ಮಾಡಿ ಪಾರ್ಕ್​​ ನಿರ್ಮಾಣ ಕಾರ್ಯಕ್ಕೆ ವೇಗ ನೀಡಬೇಕೆಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಿಮೆಂಟ್ ಕಾರ್ಖಾನೆಗಳಿಗೆ ಸಿಎಂ ಎಚ್ಚರಿಕೆ : ಕಲಬುರಗಿ ಜಿಲ್ಲೆಯಲ್ಲಿ ಸಾಕಷ್ಟು ಸಿಮೆಂಟ್ ಕಾರ್ಖಾನೆಗಳು ಈ ಭಾಗದ ನೈಸರ್ಗಿಕ ಸಂಪನ್ಮೂಲ ಬಳಸಿಕೊಳ್ಳುತ್ತಿದ್ದಾಗ್ಯೂ, ಈ ಭಾಗದ ಪ್ರಗತಿಗೆ ಪ್ರಾಮಾಣಿಕ ಕೊಡುಗೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಭಾಗದ ಅರ್ಹ ವ್ಯಕ್ತಿಗಳಿಗೆ ಉದ್ಯೋಗ ನೀಡುವುದರಿಂದ ಹಿಡಿದು, ಸಿ‌ಎಸ್‌ಆರ್ ಅನುದಾನ ಬಿಡುಗಡೆವರೆಗೆ ಕಾರ್ಖಾನೆಗಳು ಹಿಂದೆ ಬಿದ್ದಿವೆ.

ಕೋವಿಡ್ ಸೋಂಕು ನಿಯಂತ್ರಣ ಸಂದರ್ಭದಲ್ಲಿಯೂ ಸಿಮೆಂಟ್ ಕಾರ್ಖಾನೆಗಳು ತಮ್ಮ ಪಾಲಿನ ಕೊಡುಗೆ ನೀಡುವಲ್ಲಿ ಸೋತಿವೆ ಎಂಬುದರ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ. ಹೀಗಾಗಿ, ಅತಿ ಶೀಘ್ರ ಸಿಮೆಂಟ್ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Watch.. ಸದನದಲ್ಲಿ ಸದ್ದು ಮಾಡಿದ ಮಗು ಮಾರಾಟ ವಿಚಾರ: ಸೂಕ್ತ ಕ್ರಮದ ಭರವಸೆ ನೀಡಿದ ಸರ್ಕಾರ

ಕಲಬುರಗಿ ನಗರದಲ್ಲಿ ಮುಂದಿನ ಎರಡು ತಿಂಗಳಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಉದ್ಯಮಿಗಳನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಸಭೆ ನಡೆಸಲಾಗುವುದು. ಈ ಭಾಗಕ್ಕೆ ಪ್ರಮುಖ ಉದ್ದಿಮೆಗಳನ್ನು ತರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.