ಮೂಲ ಸೌಕರ್ಯ ಅಭಿವೃದ್ಧಿಗೆ ರಾಷ್ಟ್ರಪತಿ, ಪ್ರಧಾನಿ ಆಗಾಗ ಬೆಂಗಳೂರಿಗೆ ಭೇಟಿ ನೀಡಬೇಕಾ? ಬಿಡಿಎಗೆ ಹೈಕೋರ್ಟ್ ತರಾಟೆ

author img

By

Published : Jun 24, 2022, 6:46 AM IST

Karnataka High Court slams BDA

ಸರ್.ಎಂ ವಿಶ್ವೇಶ್ವರಯ್ಯ ಲೇಔಟ್​​ನಲ್ಲಿ ಕೆಲವು ನಿವೇಶನಗಳಿಗೆ ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸದ ಬಿಡಿಎ ವಿಳಂಬ ನೀತಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಯಾಗಬೇಕಾದರೆ ರಾಷ್ಟ್ರಪತಿಗಳು, ಪ್ರಧಾನಿಯವರು ಆಗಾಗ ಭೇಟಿ ನೀಡುತ್ತಿರಬೇಕಾ? ಎಂದು ಬಿಡಿಎಗೆ ಹೈಕೋರ್ಟ್ ತರಾಟೆಗೆ ತಗೆದುಕೊಂಡಿದೆ. ಸರ್.ಎಂ ವಿಶ್ವೇಶ್ವರಯ್ಯ ಲೇಔಟ್​​ನಲ್ಲಿ ಕೆಲವು ನಿವೇಶನಗಳಿಗೆ ಕುಡಿವ ನೀರು, ರಸ್ತೆ ಸಂಪರ್ಕ ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸದ ಬಿಡಿಎ ವಿಳಂಬ ನೀತಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೋರ್ಟ್ ಆದೇಶವಿದ್ದರೂ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮೂಲ ಸೌಕರ್ಯ ಒದಗಿಸದೇ ಇರುವ ಬಗ್ಗೆ ಆಕ್ಷೇಪಿಸಿ ಮಂಜುಳಾ ಮತ್ತು ಶಾರದಮ್ಮ ಎಂಬುವವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಬಿಡಿಎ ಕಾರ್ಯ ವೈಖರಿಗೆ ಅತೃಪ್ತಿ ಹೊರಹಾಕಿತು.

ಪ್ರಧಾನಿ, ರಾಷ್ಟ್ರಪತಿಗಳಂತಹ ದೆಶದ ಅತ್ಯುನ್ನತ ಸ್ಥಾನದಲ್ಲಿರುವ ಗಣ್ಯ ವ್ಯಕ್ತಿಗಳು ಆಗಾಗ್ಗೆ ಭೇಟಿ ನೀಡಿದರೆ ನಗರದ ರಸ್ತೆಗಳ ಪರಿಸ್ಥಿತಿ ಸುಧಾರಿಸಬಹುದು. ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಹಿಂದೆ ಭೇಟಿ ನೀಡಿದ ಹಿನ್ನೆಲೆ 23 ಕೋಟಿ ರೂ. ಖರ್ಚು ಮಾಡಿ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿನ ರಸ್ತೆ ಗುಂಡಿ ಮುಚ್ಚಲಾಗಿದೆ.

ಆದ್ದರಿಂದ ಪ್ರಧಾನ ಮಂತ್ರಿಗಳು ನಗರಕ್ಕೆ ಭೇಟಿ ನೀಡಿದ ಪ್ರತಿ ಬಾರಿ ಬೇರೆ ಬೇರೆ ಮಾರ್ಗದಲ್ಲಿ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿ ಕೆಟ್ಟುಹೋಗಿರುವ ರಸ್ತೆಗಳನ್ನು ಅಧಿಕಾರಿಗಳು ಸರಿಪಡಿಸಬಹುದು ಎಂದು ಬಿಡಿಎ ಕಾರ್ಯ ವೈಖರಿಗೆ ಹೈಕೋರ್ಟ್ ಚಾಟಿ ಬೀಸಿತು.

ಸರ್ಕಾರಕ್ಕೆ ಹೈಕೋರ್ಟ್​ ತರಾಟೆ: ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಹೈಕೋರ್ಟ್ ಬಿಡಿಎಗೆ ನಿರ್ದೇಶಿಸಿ ಒಂದೂವರೆ ವರ್ಷ ಕಳೆದಿದೆ. ಆದರೆ ಬಿಡಿಎ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡುತ್ತಿಲ್ಲವೆಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಇನ್ನೆರಡು ವಾರಗಳಲ್ಲಿ ನ್ಯಾಯಾಲಯದ ಆದೇಶದಂತೆ ವಿಶ್ವೇಶ್ವರಯ್ಯ ಬಡಾವಣೆ ನಿವೇಶನಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆದೇಶಿಸಿ ವಿಚಾರಣೆ ಮುಂದೂಡಿತು.

ಮಂಜುಳಾ ಮತ್ತು ಶಾರದಮ್ಮ ಅವರು ಬಿಡಿಎ ಅಭಿವೃದ್ಧಿಪಡಿಸಿರುವ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 2,156 ಮತ್ತು 2,157 ಸಂಖ್ಯೆಯ ನಿವೇಶನಗಳನ್ನು ಖರೀದಿಸಿದ್ದಾರೆ. ಕುಡಿವ ನೀರು, ಒಳಚರಂಡಿ ಸಂಪರ್ಕ ಮತ್ತು ರಸ್ತೆ ಸೌಲಭ್ಯವನ್ನು ನಿವೇಶನ ಸಂಖ್ಯೆ 2,157ರವರೆಗೆ ಮಾತ್ರ ಕಲ್ಪಿಸಲಾಗಿದೆ. ಆದರೆ, 2,158ರಿಂದ ಮುಂದಿನ ನಿವೇಶನಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.ಇದರಿಂದ ತಾವು ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ಷೇಪಿಸಿ 2020ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆ ವೇಳೆ, ಬಿಡಿಎ, ಆದಷ್ಟು ಶೀಘ್ರ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 2,158 ರಿಂದ ಒಳಚರಂಡಿ, ಕುಡಿಯುವ ನೀರು ಸಂಪರ್ಕ ಮತ್ತು ರಸ್ತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಡಿಎಗೆ 2020ರ ಅಕ್ಟೋಬರ್‌ 21ರಂದು ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂಬುದಾಗಿ ಆಕ್ಷೇಪಿಸಿ ಅರ್ಜಿದಾರರು 2021ರ ಏಪ್ರಿಲ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: ನ್ಯಾಯಾಲಯದ ಆದೇಶ ಪಾಲಿಸದ ಬಿಡಿಎ ವಿರುದ್ಧ ನ್ಯಾಯಾಂಗ ನಿಂದನೆ : ಹೈಕೋರ್ಟ್ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.