ಬೆಂಗಳೂರಿನಲ್ಲಿ ನೀವು ಸೈಟು ಖಾಲಿ ಬಿಟ್ಟಿದ್ದೀರಾ? ಹಾಗಾದ್ರೆ ಎಚ್ಚೆತ್ತುಕೊಳ್ಳಿ! ಸಕ್ರಿಯವಾಗಿದೆ ಕಳ್ಳರ ಗ್ಯಾಂಗ್‌

author img

By

Published : May 20, 2022, 11:26 AM IST

fake documents create and property selling gang arrest, Bengaluru crime news, Bengaluru plot selling news, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಮಾರಾಟ ಮಾಡುವ ಗ್ಯಾಂಗ್ ಬಂಧನ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಪ್ಲಾಟ್ ಮಾರಾಟ ಸುದ್ದಿ,

ನೀವು ಸೈಟು ಖಾಲಿ ಬಿಟ್ಟಿದ್ರೆ ಒಮ್ಮೆ ಎಚ್ಚೆತ್ತುಕೊಳ್ಳಿ. ಇಲ್ಲವಾದಲ್ಲಿ ನಿಮ್ಮದೇ ಸೈಟ್​ಗೆ​ ನಕಲಿ ದಾಖಲಾತಿ ಸೃಷ್ಟಿಸಿ ಮಾರಾಟ ಮಾಡಿಬಿಡ್ತಾರೆ!

ಬೆಂಗಳೂರು: ರಾಜಧಾನಿಯಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟದೆ ‌ಖಾಲಿ‌ ಜಾಗವನ್ನು ಹಾಗೆಯೇ ಬಿಟ್ಟಿದ್ದೀರಾ? ಅಥವಾ ಭವಿಷ್ಯದಲ್ಲಿ ಸೈಟು ಮಾರಾಟ ಮಾಡಿ ಹೆಚ್ಚು ಹಣ ಸಂಪಾದಿಸಬಹುದು ಎಂದು ನೀವೇನಾದರೂ ಲೆಕ್ಕಾಚಾರ ಹಾಕಿಕೊಂಡಿದ್ದೀರಾ?, ಕೊಂಚ ಯಾಮಾರಿದರೂ ಕಷ್ಟಪಟ್ಟು ಖರೀದಿ‌ಸಿದ ಸೈಟು ವಂಚಕರ ಪಾಲಾಗಲಿದೆ. ನಗರದಲ್ಲಿ ಖಾಲಿಯಿರುವ ಸೈಟುಗಳನ್ನು ಗುರುತಿಸಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ‌ ಮಾಡಿದ್ದ ಐವರು ಆರೋಪಿಗಳನ್ನು ವಿದ್ಯಾರಣ್ಯಪುರ‌ ಪೊಲೀಸರು ಬಂಧಿಸಿದ್ದಾರೆ.

ನರಸೀಪುರ ಗ್ರಾಮದ ನಿವಾಸಿ ಸುವರ್ಣಮ್ಮ‌ ಎಂಬುವವರು ನೀಡಿದ‌ ದೂರಿನ ಮೇರೆಗೆ ಕಬೀರ್ ಅಲಿ, ಫೈಜ್ ಸುಲ್ತಾನ, ಕಲ್ಪನಾ, ಯೋಗೇಶ್ ಹಾಗೂ ಪೂಜಾ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ‌ ಜೈಲಿಗಟ್ಟಿದ್ದಾರೆ.‌ ಬಂಧಿತರಿಂದ 102 ಗ್ರಾಂ ಚಿನ್ನಾಭರಣ ಹಾಗೂ ಟಾಟಾ ಸಫಾರಿ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ‌.

ಸುವರ್ಣಮ್ಮಗೆ 1988ರಲ್ಲಿ‌ ಎಚ್​ಎಂಟಿ‌ ಲೇಔಟ್​ನಲ್ಲಿ ಸೈಟ್ ಹಂಚಿಕೆಯಾಗಿತ್ತು. ಅವರ ಹೆಸರಿನಲ್ಲಿ ಕ್ರಯಪತ್ರ ಮಾಡಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ಸೈಟ್ ಬಳಿ ತೆರಳಿದ್ದಾಗ ತನ್ನ‌ ಹೆಸರಿನ ಮೂಲಕವೇ ಸೈಟ್ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ಗೊತ್ತಾಗಿದೆ.‌ ವಿದ್ಯಾರಣ್ಯಪುರ‌ ಪೊಲೀಸ್​ ಠಾಣೆಯಲ್ಲಿ ಸುವರ್ಣಮ್ಮ ದೂರು ದಾಖಲಿಸಿದ್ದರು. ಪ್ರಕರಣದ ಬಗ್ಗೆ ಇನ್ಸ್​ಪೆಕ್ಟರ್ ಅನಿಲ್‌ ಕುಮಾರ್ತ ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ: ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಹೋದ ವ್ಯಕ್ತಿಗೆ ವಂಚನೆ.. ಸೈಬರ್ ಪೊಲೀಸರಿಂದ ಪ್ರಕರಣ ಸುಖಾಂತ್ಯ..

ಆರೋಪಿಗಳಾದ ಕಬೀರ್ ಅಲಿ ಆರ್.ಟಿ.ನಗರ‌‌ ನಿವಾಸಿಯಾಗಿದ್ದು ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ನಗರದಲ್ಲಿ ಖಾಲಿಯಿರುವ ಸೈಟುಗಳನ್ನು ಗುರುತಿಸಿಕೊಂಡು ಅಕ್ಕಪಕ್ಕದವರನ್ನು ವಿಚಾರಿಸಿ ಸೈಟು ಮಾಲೀಕರ ಹೆಸರು ಹಾಗೂ ವಿವರ ಪಡೆದುಕೊಳ್ಳುತ್ತಿದ್ದ. ಅದೇ ರೀತಿ ಸುವರ್ಣಮ್ಮಗೆ ಸೇರಿದ‌ ಸೈಟಿನ ಕಾಗದಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡಿದ್ದ.

ಸುವರ್ಣಮ್ಮ 'ನಕಲಿ' ಮಗಳಾದ ಕಲ್ಪನಾಗೆ ದಾನ ಮಾಡಿರುವುದಾಗಿ, ನಂತರ 'ನಕಲಿ' ಗಂಡ ಯೋಗೇಶ್ ಸೈಟು ಹಸ್ತಾಂತರಿಸಿದ್ದ. ಬಳಿಕ ಪೈಜ್ ಸುಲ್ತಾನ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಸಿಕೊಂಡು‌ ಕೆಲ ದಿನಗಳ ಬಳಿಕ ರದ್ದು ಮಾಡಿಸಿ ಆರೋಪಿ ಯೊಗೇಶ್ ಮುಖಾಂತರ ವೆಂಕಟಸ್ವಾಮಿ ಅವರಿಗೆ 65 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಬಂದ ಹಣದಲ್ಲಿ‌ ಸಹಚರರಿಗೆ ಕಮಿಷನ್ ನೀಡಿ ಉಳಿದ ಹಣವನ್ನ‌ು ಕಬೀರ್ ಹಾಗೂ ಫೈಜ್ ಸುಲ್ತಾನ ಮೋಜು ಮಸ್ತಿ ಮಾಡಿದ್ದಾರೆ.

ಪದವೀಧರರಾಗಿದ್ದ ಪೈಜ್ ಸುಲ್ತಾನ: ವಂಚನೆ‌ ಪ್ರಕರಣದಲ್ಲಿ ಪ್ರಮುಖ‌ ಆರೋಪಿಯಾಗಿರುವ ಪೈಜ್ ಸುಲ್ತಾನ ಪದವೀಧರೆ. ವಿವಾಹಿತೆಯಾಗಿರುವ ಈಕೆ ವೈಯಕ್ತಿಕ ಕಾರಣಕ್ಕಾಗಿ ಗಂಡನನ್ನು ತೊರೆದಿದ್ದಳು‌. ಪರಿಚಿತನಾಗಿದ್ದ ಕಬೀರ್ ಜೊತೆ ಸೇರಿಕೊಂಡು ವಂಚನೆ‌ ಮಾರ್ಗ ಕಂಡುಕೊಂಡಿದ್ದಳು. ಸುಶಿಕ್ಷಿತೆಯಾಗಿರುವ ಈಕೆ ಗ್ರಾಹಕರೊಂದಿಗೆ ಹೇಗೆ‌ ಮಾತನಾಡಬೇಕೆಂದು ಅರಿತಿದ್ದಳು. ಪೊಲೀಸರಿಗೆ ಅನುಮಾನ ಬಾರದಿರಲು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದರು.‌ ಹಣ ಬ್ಯಾಂಕಿನಲ್ಲಿ ಜಮೆಯಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.