ಹಣ-ಆಸ್ತಿ ಎಲ್ಲವೂ ಇತ್ತು.. ಮಾನಸಿಕ ನೆಮ್ಮದಿ ಮರೆಯಾಗಿತ್ತು: ಮಕ್ಕಳ ದಾಂಪತ್ಯದ ಬಿರುಕಿಗೆ ಇಡೀ ಕುಟುಂಬ ಬಲಿ

author img

By

Published : Sep 18, 2021, 1:24 PM IST

bangalore  suicide case

ಹೆಲ್ಲೇಗೆರೆ ಶಂಕರ್ ಕುಟುಂಬಕ್ಕೆ ಯಾವುದರಲ್ಲೂ ಕೊರತೆ ಇರಲಿಲ್ಲ. ಹಣ, ಆಸ್ತಿ-ಅಂತಸ್ತು ಎಲ್ಲವೂ ಬೇಕಾಗಿದ್ದಕ್ಕಿಂತ ಹೆಚ್ಚೇ ಇತ್ತು. ಆದರೆ ಮಾನಸಿಕ ನೆಮ್ಮದಿ ಮಾತ್ರ ಕುಟುಂಬದಲ್ಲಿ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹೆಣ್ಣುಮಕ್ಕಳ ದಾಂಪತ್ಯ ಜೀವನದಲ್ಲಿನ ಬಿರುಕು ಇಡೀ ಕುಟುಂಬವನ್ನೇ ಬಲಿ ಪಡೆದ ದುರಂತ ಕಥೆ ಇಲ್ಲಿದೆ.

ಬೆಂಗಳೂರು: ಹೆಲ್ಲೇಗೆರೆ ಶಂಕರ್ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಹಣ, ಆಸ್ತಿ-ಅಂತಸ್ತು ಎಲ್ಲವೂ ಇದ್ದರೂ ಕುಟುಂಬದಲ್ಲಿ ನೆಮ್ಮದಿ ಇರಲಿಲ್ಲ ಎಂಬುದು ಹೆಲ್ಲೇಗೆರೆ ಶಂಕರ್ ಸಲ್ಲಿಸಿರುವ ದೂರಿನ ಮೂಲಕ ತಿಳಿಯುತ್ತಿದೆ.

ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಹೆಲ್ಲೇಗೆರೆ ಶಂಕರ್ ಕುಟುಂಬಕ್ಕೆ ಯಾವುದರಲ್ಲೂ ಕೊರತೆ ಇರಲಿಲ್ಲ. ಹಣ, ಆಸ್ತಿ-ಅಂತಸ್ತು ಎಲ್ಲವೂ ಬೇಕಾಗಿದ್ದಕ್ಕಿಂತ ಹೆಚ್ಚೇ ಇತ್ತು. ಆದರೆ ಮಾನಸಿಕ ನೆಮ್ಮದಿ ಮಾತ್ರ ಕುಟುಂಬದಲ್ಲಿ ಇರಲಿಲ್ಲವೆಂದು ತಿಳಿದುಬಂದಿದೆ. ಶಂಕರ್​ ಪತ್ನಿ ಕಿರಿಕಿರಿ ಸದಾ ಕಾಡುತ್ತಲೇ ಇತ್ತು. ಇದರ ಮಧ್ಯೆ ಎರಡು ಹೆಣ್ಣುಮಕ್ಕಳ ದಾಂಪತ್ಯ ಜೀವನ ಬಿರುಕು ಇಡೀ ಫ್ಯಾಮಿಲಿಯನ್ನು ಮತ್ತಷ್ಟು ಜರ್ಜರಿತರನ್ನಾಗಿ ಮಾಡಿತ್ತು. ಮಾನಸಿಕ‌ ನೆಮ್ಮದಿ ಇಲ್ಲದೇ ಕುಟುಂಬ ಸಾವಿನ ಮನೆ ಸೇರಿದೆ. ಇಬ್ಬರು ಹೆಣ್ಣು ಮಕ್ಕಳ ದಾಂಪತ್ಯದ ಬಿರುಕು ಇದೀಗ ಇಡೀ ಕುಟುಂಬವನ್ನು ಬಲಿ ಪಡೆದಿದೆ.

ಐವರ ಆತ್ಮಹತ್ಯೆಗೆ ಕಾರಣವಾಯ್ತಾ ಹೆಣ್ಣುಮಕ್ಕಳ ದಾಂಪತ್ಯ ಬಿರುಕು?

ಜೀನಿನ ಗೂಡಿನಂತಿದ್ದ ಕುಟುಂಬದಲ್ಲಿ ಶಂಕರ್ ಪತ್ನಿ ಭಾರತಿಯವರ ಕಿರಿ ಕಿರಿ ಹೆಚ್ಚು ಇತ್ತು ಅಂತ ಹೇಳಲಾಗುತ್ತಿದೆ. ಶಂಕರ್ ಹಾಗೂ ಭಾರತಿ ಮಧ್ಯೆ ಮಕ್ಕಳ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಅಲ್ಲದೇ ಮೊದಲ ಮಗಳು ಸಿಂಚನಾ ಮೂರು ವರ್ಷದ ಹಿಂದೆ ತಂದೆ ಮನೆಗೆ ಬಂದಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆ ತಂದೆ ಮನೆಗೆ ಬಂದಿದ್ದ ಸಿಂಚನಾ ಇಲ್ಲಿಯೇ ಉಳಿದುಬಿಟ್ಟಿದ್ದಳು.

ಗಂಡನ ಮನೆಗೆ ಹೋಗುವಂತೆ ಶಂಕರ್ ಹೇಳಿದ್ದರೂ ಪತ್ನಿ ಭಾರತಿ ಮಾತ್ರ ಮಗಳು ಎಲ್ಲಿಯೂ ಹೋಗೋದು ಬೇಡ, ಇಲ್ಲಿಯೇ ಇರಲಿ ಎಂದು ಪಟ್ಟು ಹಿಡಿದಿದ್ದಳು‌. ಅದರಂತೆ ಹಿರಿಯ ಪುತ್ರಿ ಇಲ್ಲಿಯೇ ಉಳಿದುಕೊಂಡಿದ್ದಳು. ಮಗಳ ಜೀವನ ಹೀಗಾಯ್ತಲ್ಲ ಅನ್ನೋ ನೋವು ಶಂಕರ್​ಗೆ ಕಾಡತೊಡಗಿತ್ತು. ಆದ್ರೆ ಶಂಕರ್ ಅವರು ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗ್ಲಿ ಅಂದರೆ ಸಾಕು ಎಲ್ಲರ ಕಣ್ಣು ಕೆಂಪಾಗ್ತಿತ್ತು.

ಒಂದು ತಿಂಗಳ ಹಿಂದೆ ಮಾತ್ರೆ ಸೇವಿಸಿ ಶಂಕರ್ ಎರಡನೇ ಪುತ್ರಿ ಆತ್ಮಹತ್ಯೆ ಯತ್ನ:

ಎರಡನೇ ಪತ್ರಿ ಸಿಂಧೂರಾಣಿಯ 9 ತಿಂಗಳ ಕಂದಮ್ಮನ ನಾಮಕರಣ ಮತ್ತು ಕಿವಿ ಚುಚ್ಚಿಸುವ ವಿಚಾರವಾಗಿ ಹಲ್ಲೇಗೇರೆ ಶಂಕರ್ ಮತ್ತು ಮಗಳು ಸಿಂಧೂರಾಣಿ ಪತಿಯ ಕುಟುಂಬದ ನಡುವೆ ಸಾಕಷ್ಟು ಮೈಮನಸ್ಸು ಇತ್ತು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಅಲ್ಲದೇ ಇದೇ ವಿಚಾರಕ್ಕೆ ಸಿಂಧೂರಾಣಿ ಒಂದು ತಿಂಗಳ‌ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಕೂಡ ಮಾಡಿದ್ದಳಂತೆ. ಆಸ್ಪತ್ರೆಗೆ ದಾಖಲಿಸಿ ಮತ್ತೆ ಮನೆಗೆ ಕರೆತರಲಾಗಿತ್ತು. ಆದರೆ ಅದು ಅಲ್ಲಿಗೆ ಸರಿಹೋಗಲಿಲ್ಲ.

ಕುಟುಂಬಸ್ಥರ ನಡುವೆ ಮನಸ್ತಾಪ:

ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗಲಿ ಅಂತ ಶಂಕರ್ ಪದೇ ಪದೇ ಹೇಳುತ್ತಿದ್ದರು. ಆದರೆ ಶಂಕರ್ ಪತ್ನಿ ಭಾರತಿ ಮಾತ್ರ ಮಕ್ಕಳು ಮನೆಯಲ್ಲೇ ಇರಲಿ, ತೊಂದರೆ ಏನು ಎಂದು ಹೇಳತೊಡಗಿದ್ದರು. ಇದು ಶಂಕರ್ ಹಾಗೂ ಪತ್ನಿ, ಪುತ್ರಿಯರ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗ್ತಿದೆ.

ಜಗಳವಾಗಿ ಶಂಕರ್​ ಮನೆಯಿಂದ ಹೊರನಡೆದ ಬಳಿಕ ಆತ್ಮಹತ್ಯೆ:

ಸೆ.12ರ ಭಾನುವಾರ ಇದೇ ವಿಚಾರವಾಗಿ ಪುತ್ರಿಯರು ಮತ್ತು ಶಂಕರ್ ಪತ್ನಿ ಸೇರಿ ಶಂಕರ್ ಜೊತೆಗೆ ಜಗಳವಾಡಿದ್ದಾರೆ. ಶಂಕರ್ ಮಾತಿನಿಂದ ಮನನೊಂದು ಮತ್ತು ಜೀವನ ಹೀಗಾಯ್ತಲ್ಲ ಎಂದು ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಹೇಳಲಾಗ್ತಿದೆ.

ಮಕ್ಕಳಿಗೆ ಏನೂ ಕಡಿಮೆ ಮಾಡಿರಲಿಲ್ಲ ಶಂಕರ್​:

ತಮ್ಮ ಮೂವರು ಮಕ್ಕಳಿಗೂ ಶಂಕರ್ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು‌. ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಐಎಎಸ್ ಕೋಚಿಂಗ್​ಗೆ ಸೇರಿಸಿದ್ದ ಶಂಕರ್, ಇದಕ್ಕಾಗಿ ಪಿಕಪ್‌ ಡ್ರಾಪ್​ಗಾಗಿ ಕಾರಿನ ವ್ಯವಸ್ಥೆ ಕೂಡ ಮಾಡಿದ್ದರು. ಮೊದಲ ಮಗಳು ಸಿಂಚನ ಬಿಇ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ‌ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಮದುವೆಯಾಗಿ ಮಗು ಹುಟ್ಟಿದ ಬಳಿಕ ಕೆಲಸಕ್ಕೆ ಹೋಗುವುದದನ್ನ ನಿಲ್ಲಿಸಿದ್ದಳು.

ಎರಡನೇ ಮಗಳು ಸಿಂಧೂರಾಣಿ ಎಂಬಿಎ ಪದವೀಧರೆ, ಮಗ ಮಧು ಸಾಗರ್ ಬಿಇ‌ ಪದವೀಧರನಾಗಿದ್ದ. ಪದವಿ ಮುಗಿಸಿ ಬ್ಯಾಂಕ್ ಆಫ್‌ ಬರೋಡಾದಲ್ಲಿ ಅಪ್ಲಿಕೇಶನ್ ‌ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ. ಮಗನ ಭವಿಷ್ಯಕ್ಕಾಗಿ ಬಾರ್ ಲೈಸೆನ್ಸ್ ಪಡೆದಿದ್ದ ಶಂಕರ್, ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದ್ದರು. ಇಟ್ಟಮಡು ಮುಖ್ಯರಸ್ತೆಯಲ್ಲಿ ಬಾರ್ ನಿರ್ಮಾಣ ಕೆಲಸ ಕೂಡ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ ?

ದೂರಿನಲ್ಲಿ ಶಂಕರ್ ಬರೆದಿರುವ ಮಾಹಿತಿ ಲಭ್ಯವಾಗಿದೆ‌. ನನ್ನ ಆಸ್ತಿ, ಹಣ ಎಲ್ಲವನ್ನು ಹೆಂಡತಿ ಹಾಗೂ ಮಗನಿಗೆ ನೀಡಿದ್ದೆ‌. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು. ಕಳೆದ ಭಾನುವಾರ ಹೆಂಡತಿ‌ ಜೊತೆಗೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿತ್ತು ಎಂದು ದೂರಿನಲ್ಲಿ‌ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಐವರ ಸಾವು ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಹೆಣ್ಣು ಮಕ್ಳಳನ್ನು ಗಂಡನ ಮನೆಗೆ ಕಳುಹಿಸುವಂತೆ ಹೇಳ್ತಿದ್ದರೂ ಕಳಿಸುವುದಿಲ್ಲ ಎಂದು ಪತ್ನಿ ಭಾರತಿ ಜಗಳ ಮಾಡಿದ್ದಳು. ಈ ವೇಳೆ ಹೆಣ್ಣು ಮಕ್ಕಳ ಜೀವನ ಹಾಳು ಮಾಡ್ತಿದ್ದೀಯಾ ಎಂದು ಕೋಪಗೊಂಡಿದ್ದೆ.

ಹಣದ ವ್ಯವಹಾರದ ವಿಚಾರವಾಗಿ ಮಗನ ಜೊತೆಗೆ ಕೂಡ ಭಿನ್ನಾಭಿಪ್ರಾಯವಿತ್ತು. ಮಗ ಬಾರ್ ಓಪನ್ ಮಾಡಲು 20 ಲಕ್ಷ ರೂ. ಕೊಟ್ಟು ರಿಜಿಸ್ಟರ್ ಮಾಡಿಸಲು ರೆಡಿ ಮಾಡಿಕೊಂಡಿದ್ದನು. ರಿಜಿಸ್ಟರ್ ಮಾಡಲು ಸಹಿ ಬೇಕಾಗಿದ್ದರಿಂದ ನಾನು ನಿರಾಕರಿಸಿದ್ದೆ. ಈ ವಿಚಾರವಾಗಿ ಕೂಡ ಭಾನುವಾರ ಮನೆಯಲ್ಲಿ ಜಗಳವಾಗಿತ್ತು. ಆಶ್ರಮ ಕಟ್ಟಿಸಲು 10 ಲಕ್ಷ ರೂ. ಅನ್ನು ಹೆಂಡತಿ ಮಕ್ಕಳಲ್ಲಿ ಕೇಳಿದ್ದೆ. ಈ ವೇಳೆ ಹಣ ನೀಡುವುದಕ್ಕೆ ಪತ್ನಿ, ಮಗ‌‌ ನಿರಾಕರಿಸಿದ್ದರು. ಈ ವಿಚಾರವಾಗಿ ಕೂಡ ಭಾನುವಾರ ಜಗಳವಾಗಿ ಮನೆ ಬಿಟ್ಟಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.