ವಿಧಾನಸೌಧ ಒಳಗೊಂಡಂತೆ ಸುತ್ತಲಿನ ಐದು ಕಿಮೀ ವ್ಯಾಪ್ತಿಯನ್ನು ವಿಶೇಷ ಟ್ರಾಫಿಕ್ ವಲಯವಾಗಿಸಲು ನಿರ್ಧಾರ : ಸಿಎಂ

author img

By

Published : Dec 31, 2021, 5:06 AM IST

Chief minister basavaraja bommai on Bengaluru traffic police program

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಹಂತದಲ್ಲಿ ಪೊಲೀಸರಿಗೆ 10,475 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಎರಡನೇ ಹಂತಕ್ಕೂ ಶೀಘ್ರದಲ್ಲೇ ಅನುಮತಿ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

ಬೆಂಗಳೂರು : ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಧಾನಸೌಧ ಒಳಗೊಂಡಂತೆ ಸುತ್ತಮುತ್ತಲ ಐದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ವಿಶೇಷ ಟ್ರಾಫಿಕ್ ವಲಯ’ವನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಗಮ ಸುರಕ್ಷಾ ಸಂಚಾರಕ್ಕಾಗಿ ತಂತ್ರಜ್ಞಾನಾಧಾರಿತ ಸೌಲಭ್ಯಗಳು ಮತ್ತು ಸಂಚಾರ ಬೀಟ್ ವ್ಯವಸ್ಥೆ ಹಾಗೂ ಸಂಚಾರ ಪೊಲೀಸರ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ವಿಧಾನಸೌಧ ಒಳಗೊಂಡಂತೆ ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್‌ನಲ್ಲಿ ಮಾದರಿ ವಿಶೇಷ ಟ್ರಾಫಿಕ್ ವಲಯ ರೂಪಿಸಲಾಗುವುದು ಎಂದರು.

Chief minister basavaraja bommai on Bengaluru traffic police program
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಈ ವಿಶೇಷ ಟ್ರಾಫಿಕ್ ವಲಯದಲ್ಲಿ ವಿಶೇಷ ರಸ್ತೆಗಳು, ಪಾರ್ಕಿಂಗ್ ಸೌಲಭ್ಯ, ಪಾದಚಾರಿ ಮಾರ್ಗ, ಅಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ಸಿಗ್ನಲ್, ಸಂಚಾರ ಪೊಲೀಸರಿಗೆ ವಿಶೇಷ ಸಮವಸ್ತ್ರ, ಬಾಡಿವಾರ್ನ್ ಕ್ಯಾಮರಾ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಯಾಮೆರಾ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಪ್ರಯೋಗ ಯಶಸ್ವಿಯಾದರೆ, ನಗರದಲ್ಲಿ ಇನ್ನೂ ಆರು ವಿಶೇಷ ಟ್ರಾಫಿಕ್ ವಲಯ ರೂಪಿಸಲಾಗುವುದು ಎಂದು ಹೇಳಿದರು.

ತಂತ್ರಜ್ಞಾನ ಅಗತ್ಯ : ಪೊಲೀಸ್ ಇಲಾಖೆಗೆ ತಂತ್ರಜ್ಞಾನ ಅಗತ್ಯ ಮತ್ತು ಅನಿವಾರ್ಯವಾಗಿದೆ. ಬೆಂಗಳೂರು ನಗರದಲ್ಲಿ ದಿನ ಹುಟ್ಟುವ ಶಿಶುಗಳಿಗಿಂತ ಅಧಿಕ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ದಿನಕ್ಕೆ ಐದು ಸಾವಿರ ದ್ವಿಚಕ್ರವಾಹನಗಳು ಹಾಗೂ ಮೂರು ಸಾವಿರ ದೊಡ್ಡ ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ಹಾಗಾಗಿ, ಎಂತಹ ಗುಣಮಟ್ಟದ ರಸ್ತೆಗಳನ್ನು ಮಾಡಿದರೂ ಉಳಿಯುವುದಿಲ್ಲ. ಹೀಗಾಗಿ ನಗರದಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆಯಿರುವ 12 ಕಾರಿಡಾರ್‌ಗಳನ್ನು ಗುರುತಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

Chief minister basavaraja bommai on Bengaluru traffic police program
ಸಂಚಾರ ಪೊಲೀಸರೊಂದಿಗೆ ಸಿಎಂ

ಆಧುನಿಕ ಸೌಲಭ್ಯಗಳು ಬಂದಾಗ ಹೊಸ ಸವಾಲುಗಳು ಎದುರಾಗುತ್ತವೆ. ಹೀಗಾಗಿ ತಂತ್ರಜ್ಞಾನ ಅಳವಡಿಸಿಕೊಂಡ ಬಳಿಕ ಎದುರಾಗುವ ಹೊಸ ಸವಾಲು ಎದುರಿಸಲು ಸಿದ್ಧರಿರಬೇಕು. ಸಂಚಾರ ಪೊಲೀಸ್ ವಿಭಾಗದ ಕಂಟ್ರೋಲ್ ರೂಂ ಮತ್ತಷ್ಟು ಬಲಗೊಳಿಸಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

16 ಸಾವಿರ ಪೊಲೀಸರ ನೇಮಕ : ಪೊಲೀಸ್ ವ್ಯವಸ್ಥೆ ಇಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಸಮಾಜ ಹಾಗೂ ಸರ್ಕಾರ ಪೊಲೀಸರಿಗೆ ಗೌರವ ಕೊಡಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಹಂತದಲ್ಲಿ ಪೊಲೀಸರಿಗೆ 10,475 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಎರಡನೇ ಹಂತಕ್ಕೂ ಶೀಘ್ರದಲ್ಲೇ ಅನುಮತಿ ನೀಡಲಾಗುವುದು. ಮುಂದಿನ ವರ್ಷದೊಳಗೆ 16 ಸಾವಿರ ಪೊಲೀಸರ ನೇಮಕಾತಿ ಮುಗಿಸಲಾಗುವುದು. ಇನ್ನು ರಾಜ್ಯದಲ್ಲಿ ಆರು ಎಫ್‌ಎಸ್‌ಎಲ್ ಲ್ಯಾಬ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಲ್ಯಾಬ್ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಉಳಿದ ನಾಲ್ಕು ಲ್ಯಾಬ್‌ಗಳನ್ನು ಶೀಘ್ರದಲ್ಲೇ ಸ್ಥಾಪಿಸುವುದಾಗಿ ಹೇಳಿದರು.

ಗೃಹಸಚಿವರಾದ ಆರಗ ಜ್ಞಾನೇಂದ್ರ ಮಾತು: ಇದೇ ವೇಳೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರು ಸಂಚಾರ ಪೊಲೀಸರಿಗೆ ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ಸೌಲಭ್ಯ ಒದಗಿಸಲಾಗಿದೆ. 2,028 ಜಿಪಿಎಸ್ ಆಧರಿತ ಬಾಡಿ ಕ್ಯಾಮೆರಾ ಒದಗಿಸಲಾಗುತ್ತಿದೆ. ಈ ಸುಧಾರಿತ ಕ್ಯಾಮೆರಾಗಳು ವಾಹನಗಳ ನಿಯಮ ಉಲ್ಲಂಘನೆ ಮತ್ತು ಕಳುವಾದ ವಾಹನಗಳ ಬಗ್ಗೆ ಮಾಹಿತಿ ನೀಡುತ್ತದೆ. ಸಂಚರಿಸುವಾಗ ನಿಯಮ ಉಲ್ಲಂಘಿಸುವ ವಾಹನಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.

ತಂತ್ರಜ್ಞಾನ ಬಳಕೆಯಿಂದ ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಘರ್ಷಣೆಗಳು ತಪ್ಪಲಿವೆ. ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ರಸ್ತೆಯಲ್ಲಿ ಇತರ ವಾಹನಗಳನ್ನು ಅಡ್ಡಗಟ್ಟುವುದು, ವಿನಾಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುವುದನ್ನು ನಿಯಂತ್ರಿಸಲು ಇದು ಸಹಕರಿಸುತ್ತದೆ ಎಂದರು. ವಾಹನಗಳ ಸಂಖ್ಯೆ ಹೆಚ್ಚಿದೆ. ತಾಲೂಕು ಮಟ್ಟದಲ್ಲೂ ಸಂಚಾರ ಪೊಲೀಸ್ ಠಾಣೆಗಳನ್ನು ಕೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆಯನ್ನು ಸರಿಮಾಡಲು ಸರಳೀಕರಣಗೊಳಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ರೋಡ್ ಈಜಿ ಆ್ಯಪ್ ಲೋಕಾರ್ಪಣೆ: ಈ ಸಂದರ್ಭದಲ್ಲಿ ಸಂಚಾರ ಪೊಲೀಸರ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳು-ಕೈಪಿಡಿ ಸಂಚಾರ ಸವಾಲುಗಳು-ಪರಿಹಾರ ಹೊತ್ತಿಗೆಯನ್ನು ಗೃಹ ಸಚಿವರು ಲೋಕಾರ್ಪಣೆ ಮಾಡಿದರು.

ಇದೇ ವೇಳೆ ಸಂಚಾರ ಪೊಲೀಸರಿಗೆ ಬಾಡಿವಾರ್ನ್ ಕ್ಯಾಮೆರಾ ವಿತರಿಸಲಾಯಿತು. ಸಂಚಾರ ಪೊಲೀಸರ ಕಾರ್ಯ ನಿರ್ವಣೆಗೆ ಮಾರ್ಗಸೂಚಿ, ಸಂಚಾರ ಸ್ಪಂದನಾ ಕೈಪಡಿ, ಸಂಚಾರ ನಿಯಮ ಉಲ್ಲಂಘನೆಗೆ ‘ಎಸ್‌ಎಂಎಸ್ ಚಲನ್’ ಬಿಡುಗಡೆಗೊಳಿಸಲಾಯಿತು. ಇನ್ನು ನಗರದಲ್ಲಿ ವಾಹನ ಸಂಚಾರ ದಟ್ಟಣೆ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಮಾಹಿತಿ ನೀಡುವ ‘ರೋಡ್ ಈಜಿ ಆ್ಯಪ್’ ಲೋಕಾರ್ಪಣೆ ಮಾಡಲಾಯಿತು.

ಮಾಜಿ ಸಚಿವ ಸುರೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: BBMP in 2021: ಜನಪ್ರತಿನಿಧಿಗಳ ಆಡಳಿತವಿಲ್ಲ.. ಕೊರೊನಾದಿಂದ ನಗರಾಭಿವೃದ್ಧಿಯಲ್ಲೂ ಮಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.