ಬೆಂಗಳೂರು/ಚಾಮರಾಜನಗರ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ನೆರವೇರಿಸಲಾಯಿತು.
ಆಯುಧ ಪೂಜೆ ಮತ್ತು ವಿಜಯ ದಶಮಿ ಅಂಗವಾಗಿ ನಾಳೆಯಿಂದ ಎರಡು ದಿನ ಸರ್ಕಾರಿ ರಜೆ ಇರುವುದರಿಂದ ಸಿಎಂ ಬಸವರಾಜ ಬೊಮ್ಮಾಯಿ ಕಚೇರಿ ಸೇರಿದಂತೆ ಸಚಿವರು, ಅಧಿಕಾರಿಗಳ ಕಚೇರಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳನ್ನು ಇಂದೇ ಸ್ವಚ್ಛಗೊಳಿಸಿ, ಬಾಗಿಲಿಗೆ ಬಾಳೆ ದಿಂಡು ಕಟ್ಟಿ, ಹೂವು, ರಂಗೋಲಿ ಹಾಗೂ ತಳಿರು - ತೋರಣಗಳಿಂದ ಅಲಂಕರಿಸಲಾಗಿತ್ತು.
ಸಿಹಿ ಹಂಚಿ ಸಂಭ್ರಮ:
ಬೆಳಗ್ಗೆಯಿಂದಲೇ ಕರ್ನಾಟಕ ವಿಧಾನಸಭೆ ಸಚಿವಾಲಯ ಶಾಸನ ರಚನಾ ಶಾಖೆ ಸಿಬ್ಬಂದಿ ಸೇರಿದಂತೆ ವಿಧಾನ ಸೌಧದ ಎಲ್ಲ ಸಿಬ್ಬಂದಿ ಸೇರಿ ರಂಗೋಲಿ ಬಿಡಿಸಿ, ಕಚೇರಿಗೆ ಅಲಂಕರಿಸಿ ಸಂಭ್ರಮಿಸಿದರು. ಕಚೇರಿ ಸಿಬ್ಬಂದಿಗಳು ಹೊಸ ಉಡುಗೆ ತೊಟ್ಟು, ತಮ್ಮ ಮಕ್ಕಳ ಜತೆಗೆ ಬಂದು, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ನಾಡ ಹಬ್ಬ ದಸರಾ ಅಚರಣೆ ನಿಮಿತ್ತ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ (ಬೈರತಿ) ಅವರು ಪೂಜೆ ಸಲ್ಲಿಸುವ ಮೂಲಕ ನಾಡಿನ ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಚಾಮರಾಜನಗರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ
ಚಾಮರಾಜನಗರದ ಜಿಲ್ಲಾಡಳಿತ ಭವನ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಆಯುಧ ಪೂಜೆ ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಡಿಸಿ ಕಚೇರಿ ಸೇರಿದಂತೆ ಜಿಲ್ಲಾಡಳಿತ ಭವನದ ಕಚೇರಿಗಳು ತಳಿರು ತೋರಣ, ಬಣ್ಣ - ಬಣ್ಣದ ರಂಗೋಲಿಗಳಿಂದ ಸಿಂಗರಿಸಿ ನಿರ್ದೇಶಕರು, ಉಪನಿರ್ದೇಕರು ತಮ್ಮ ಕಚೇರಿಗಳಲ್ಲಿ ಸರಸ್ವತಿ, ಚಾಮುಂಡೇಶ್ವರಿ ಫೋಟೋಗಳಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.