ಬೆಂಗಳೂರು ಬಾರ್​ನಲ್ಲಿ ಬಿಲ್ ಕಟ್ಟುವಾಗ ಜಗಳ.. ಮಧ್ಯಸ್ಥಿಕೆ ವಹಿಸಿ ಬಿಲ್ ಕಟ್ಟಿಸಿದ್ದಕ್ಕೆ ಸ್ನೇಹಿತನ ಕೊಲೆ

author img

By

Published : Aug 4, 2022, 9:21 AM IST

ಬೆಂಗಳೂರಲ್ಲಿ ಸ್ನೇಹಿತನ ಕೊಲೆ,friend murder in bengaluru

ಬಾರ್​ನಲ್ಲಿ ಬಿಲ್ ಕಟ್ಟಿ ಎಂದು ಹೇಳಿದ್ದ ಸ್ನೇಹಿತನ ಕೊಲೆ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರು: ಬಿಲ್ ವಿಚಾರವಾಗಿ ಬಾರ್ ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿ ಬಿಲ್ ಕಟ್ಟಿ ಎಂದು ಹೇಳಿದ್ದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ಒಬ್ಬನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಜೈ ಕುಮಾರ್ ಬಂಧಿತ ಆರೋಪಿ. ಪ್ರಕಾಶ್ ಕೊಲೆಯಾದವರು. ಜುಲೈ 29 ರಂದು ಸಹಚರರೊಂದಿಗೆ ಸೇರಿ ಜೈ ಕುಮಾರ್ ಚಾಕುವಿನಿಂದ ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ ಸಾವನ್ನಪ್ಪಿದರು‌.‌ ಈ ಸಂಬಂಧ ಕೊಲೆ‌ ಪ್ರಕರಣ ದಾಖಲಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.‌ ಕೃತ್ಯದಲ್ಲಿ ಭಾಗಿಯಾದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದು ಆಗಿದ್ದೇನು ?: ಕಳೆದ‌‌ ಜುಲೈ 29ರಂದು ಸ್ನೇಹಿತರೊಂದಿಗೆ ಇಂದಿರಾನಗರ ಡಬಲ್‌ ರೋಡ್​​ನಲ್ಲಿರುವ ಟೆಪ್ಟೇಷನ್ ಬಾರ್ ಅಂಡ್ ರೆಸ್ಟೋರೆಂಟ್​​ನಲ್ಲಿ ಪ್ರಕಾಶ್ ಮದ್ಯಪಾನ ಮಾಡುತ್ತಿದ್ದರು. ಪಕ್ಕದ ಟೇಬಲ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಸ್ನೇಹಿತರಾದ ಜೈ ಕುಮಾರ್ ಹಾಗೂ ಆತನ ಮೂವರು ಗೆಳೆಯರು ಡ್ರಿಂಕ್ಸ್ ಮಾಡಿ ಬಿಲ್ ಕೊಡುವ ವಿಚಾರದಲ್ಲಿ ಬಾರ್ ಕ್ಯಾಷಿಯರ್​​ನೊಂದಿಗೆ ತಗಾದೆ ತೆಗೆದಿದ್ದರು.‌

ಇದನ್ನ ಗಮನಿಸಿದ‌ ಪ್ರಕಾಶ್‌, ಅವರನ್ನು ಸಮಾಧಾನಪಡಿಸಿ ಬಿಲ್‌ ಪಾವತಿಸುವಂತೆ ಸೂಚಿಸಿ ಹೊರಬಂದಿದ್ದ. ಬಳಿಕ ಜೊತೆಯಲ್ಲಿದ್ದವರನ್ನು ಡ್ರಾಪ್ ಮಾಡಿ ಮನೆಗೆ ಹಿಂತಿರುಗುವಾಗ ಆರೋಪಿಗಳು ಬೈಕ್​​ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಬಿಲ್ ಪಾವತಿಸುವಂತೆ ಹೇಳಲು ನೀನು ಯಾರೋ ಎಂದು ಕ್ಯಾತೆ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಳಿಕ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ಇದನ್ನೂ ಓದಿ: ಹೆತ್ತವಳ ಕೈ ಬಿಟ್ಟ ಮಗ: ಸಿಮ್​ ಇಲ್ಲದ ಮೊಬೈಲ್​ ಕೊಟ್ಟು ಪರಾರಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.