ಹೆದ್ದಾರಿ ದಾಟುತ್ತಿದ್ದಾಗ ಗುದ್ದಿದ ಟ್ರಕ್‌: ತಾಯಿ, ಮಗಳು ಸೇರಿ 6 ಮಂದಿ ದಾರುಣ ಸಾವು!

author img

By

Published : Jan 23, 2023, 8:06 AM IST

Accidental truck

ಉತ್ತರ ಪ್ರದೇಶದ ಲಕ್ನೋ-ಕಾನ್ಪುರ ಹೆದ್ದಾರಿಯಲ್ಲಿ ಭೀಕರ ರಸ್ತೆ ಅವಘಡ ಸಂಭವಿಸಿದೆ.

ಉನ್ನಾವೊ (ಉತ್ತರ ಪ್ರದೇಶ): ವೇಗವಾಗಿ ಸಂಚರಿಸುತ್ತಿದ್ದ ಟ್ರಕ್‌ವೊಂದು​ ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಒಟ್ಟು 6 ಮಂದಿ ದಾರುಣವಾಗಿ ಸಾವಿಗೀಡಾದ ಘಟನೆ ಉನ್ನಾವೊ ಜಿಲ್ಲೆಯ ಲಕ್ನೋ-ಕಾನ್ಪುರ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನು ತಾಯಿ ಶಕುಂತಲಾ ಮತ್ತು ಮಗಳು ಶಿವಾನಿ ಎಂದು ಗುರುತಿಸಲಾಗಿದೆ. ಇವರು ಅಚಲಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಕಾನ್ಪುರ-ಲಖನೌ ಹೆದ್ದಾರಿ ದಾಟುತ್ತಿದ್ದರು ಎಂದು ತಿಳಿದುಬಂದಿದೆ.

ಈ ಇಬ್ಬರು ಜಾಲಿಂಖೇಡಾ ಎಂಬ ಪ್ರದೇಶದ ತಮ್ಮ ಮನೆಗೆ ತೆರಳುತ್ತಿದ್ದರು. ರಸ್ತೆ ದಾಟುತ್ತಿದ್ದಾಗ ಲಕ್ನೋ ಕಡೆಯಿಂದ ವೇಗವಾಗಿ ಬಂದಪ್ಪಳಿಸಿದ ಟ್ರಕ್​ ಇವರ ಮೈಮೇಲೆ ಹರಿದಿದ್ದಲ್ಲದೇ, ಪಕ್ಕದಲ್ಲಿ ನಿಂತಿದ್ದ ಸೈಕ್ಲಿಸ್ಟ್​ ಛೋಟೆ ಲಾಲ್​ ಎಂಬಾತನ ಪ್ರಾಣವನ್ನೂ ಬಲಿ ಪಡೆದಿದೆ. ಇಷ್ಟಾದ ನಂತರ, ವಾಹನ ನಿಯಂತ್ರಣ ಸಿಗದೇ ಅಲ್ಲೇ ಇದ್ದ ಮಾರುತಿ ಕಾರ್​ಗೂ ಡಿಕ್ಕಿ ಹೊಡೆದು ಕಾರನ್ನು ಸ್ವಲ್ಪ ದೂರ ಎಳೆದೊಯ್ದಿದೆ. ಅಂತಿಮವಾಗಿ ಟ್ರಕ್ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ.

ತಕ್ಷಣವೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಎಸ್ಪಿ ಸಿದ್ಧಾರ್ಥ್​ ಶಂಕರ್​ ಮೀನಾ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಶಿ ಶೇಖರ್ ಸಿಂಗ್ ಸೇರಿದಂತೆ ಉಳಿದ ಪೊಲೀಸರು ಠಾಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಾಯಿ, ಮಗಳು ಹಾಗು ಸೈಕಲ್​ ಸವಾರನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಕ್ರೇನ್​ ಸಹಾಯದಿಂದ ಟ್ರಕ್ ಅ​ನ್ನು ಹೊಂಡದಿಂದ ಮೇಲೆತ್ತಲಾಗಿದೆ.

ಟ್ರಕ್​ನಲ್ಲಿ ಕಾರು ಸಿಲುಕಿಕೊಂಡಿತ್ತು. ಸತತ ಪರಿಶ್ರಮದ ನಂತರ ಅದರಲ್ಲಿದ್ದ ಮೂವರನ್ನು ಹೊರ ತೆಗೆದಿದ್ದಾರೆ. ಈ ಮೂವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತೀವ್ರ ಗಾಯಗಳಾಗಿದ್ದ ಕಾರಣ ಅವರೆಲ್ಲರೂ ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದ್ದಾರೆ. ಕಾರಿನಲ್ಲಿ ಮೃತಪಟ್ಟವರನ್ನು ವಿಮಲೇಶ್​ ತಿವಾರಿ, ಅವರ ಪುತ್ರ ಶಿವಾಂಕ್​ ಮತ್ತು ಅಳಿಯ ಪುರಣ್​ ದೀಕ್ಷಿತ್​ ಎಂದು ಗುರುತಿಸಲಾಗಿದೆ. ವಿಮಲೇಶ್​ ತಿವಾರಿ ಅಚಲ್​ಗಂಗ್​ ಪೊಲೀಸ್​ ಠಾಣಾ ವ್ಯಾಪ್ತಿಯ ಜೋವ ಗ್ರಾಮದ ನಿವಾಸಿಯಾಗಿದ್ದಾರೆ. ಕಾರಿನಲ್ಲಿದ್ದ ಅವರ ಅಳಿಯ ಅಜ್ಗೈನ್​ ಪೊಲೀಸ್​ ಠಾಣಾ ವ್ಯಾಪ್ತಿಯ ನವಾಬ್​ ಗಂಜ್​ ಪಟ್ಟಣದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದುರ್ಘಟನೆಯನ್ನು ಕಣ್ಣಾರೆ ಕಂಡ ಅಲ್ಲಿಯ ಜನರು ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿ, ಹೆದ್ದಾರಿ ತಡೆ ನಡೆಸಿದರು. ಇದರಿಂದ ರಸ್ತೆಯುದ್ದಕ್ಕೂ ಟ್ರಾಫಿಕ್​ ಜಾಮ್​ ಉಂಟಾಯಿತು. ಪೊಲೀಸರು ಪರಿಸ್ಥಿತಿ ಸುಧಾರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ. ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ನೆಲ್ಲೂರಿನಲ್ಲಿ ರೈಲು ಡಿಕ್ಕಿಯಾಗಿ ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.