ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಕೇಸ್​: ಬಂಧಿತ ಆರೋಪಿ ಬಳಿ ಕರ್ನಾಟಕ ವಿಳಾಸದ 2 ಪಾಸ್​ಪೋರ್ಟ್​​ ಪತ್ತೆ

author img

By

Published : Nov 24, 2022, 5:35 PM IST

trs-mlas-poaching-case-two-passports-found-from-accused-ramachandra-bharati-claims-sit

ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣದಲ್ಲಿ ಬಂಧನವಾಗಿರುವ ರಾಮಚಂದ್ರ ಭಾರತಿ ಬಳಿ ಎರಡು ಪಾಸ್​ಪೋರ್ಟ್​ಗಳು ಪತ್ತೆಯಾಗಿದ್ದು, ಎರಡೂ ಪಾಸ್​ಪೋರ್ಸ್​ಗಳಲ್ಲಿ ಕರ್ನಾಟಕದ ಪುತ್ತೂರು ಮತ್ತು ಕೊಡಗಿನ ವಿಳಾಸ ಇದೆ ಎಂದು ತಿಳಿದುಬಂದಿದೆ.

ಹೈದರಾಬಾದ್ (ತೆಲಂಗಾಣ): ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣದ ತನಿಖೆಯನ್ನು ತೆಲಂಗಾಣದ ಎಸ್​ಐಟಿ ಚುರುಕುಗೊಳಿಸಿದ್ದು, ಆರೋಪಿಗಳಲ್ಲಿ ಒಬ್ಬರಾದ ರಾಮಚಂದ್ರ ಭಾರತಿ ಅವರಿಂದ ವಿಭಿನ್ನ ಹೆಸರಿನ ಎರಡು ಪಾಸ್‌ಪೋರ್ಟ್‌ಗಳನ್ನು ಎಸ್​ಐಟಿ ವಶಪಡಿಸಿಕೊಂಡಿದೆ.

ತೆಲಂಗಾಣದ ಆಡಳಿತಾರೂಢ ಶಾಸಕರ ಖರೀದಿ ಯತ್ನ ಆರೋಪದ ಮೇಲೆ ಅಕ್ಟೋಬರ್​ 26ರಂದು ಹೈದರಾಬಾದ್ ಸಮೀಪದ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಟಿಆರ್​ಎಸ್ ಪಕ್ಷ​ ಬಿಡಲು ಬಿಜೆಪಿಯಿಂದ 100 ಕೋಟಿ ರೂ ಹಾಗೂ ಗುತ್ತಿಗೆ ಆಮಿಷವೊಡ್ಡಲಾಗಿದೆ ಎಂದು ಶಾಸಕರು ಆರೋಪಿಸಿದ್ದರು. ಈ ಪ್ರಕರಣದ ಏಜೆಂಟ್​ಗಳು ಎನ್ನಲಾದ ಆರೋಪಿಗಳಲ್ಲಿ ರಾಮಚಂದ್ರ ಭಾರತಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ: ತೆಲಂಗಾಣದೊಂದಿಗೆ ದೆಹಲಿ, ಆಂಧ್ರ ಸರ್ಕಾರಗಳನ್ನೂ ಉರುಳಿಸಲು ಪಿತೂರಿ: ಬಿಜೆಪಿ ವಿರುದ್ಧ ಕೆಸಿಆರ್ ಆರೋಪ

ಇದೀಗ ರಾಮಚಂದ್ರ ಭಾರತಿ ಬಳಿ ಎರಡು ಪಾಸ್​ಪೋರ್ಸ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್​ಐಟಿ ತಿಳಿಸಿದ್ದು, ಎರಡನೇ ಪಾಸ್‌ಪೋರ್ಟ್​​ ಅನ್ನು ನಕಲಿ ಮೂಲಕ ಪಡೆಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ರಾಮಚಂದ್ರ ಭಾರತಿ ಅವರಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್ ಮತ್ತು ಎರಡು ಸೆಲ್ ಫೋನ್‌ಗಳ ವಿಧಿವಿಜ್ಞಾನ ಪರೀಕ್ಷೆಯ ಆಧಾರದ ಮೇಲೆ, ಅವರು ಎರಡು ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುವುದು ಕಂಡುಬಂದಿದೆ.

ಎರಡೂ ಪಾಸ್​ಪೋರ್ಸ್​ಗಳಲ್ಲಿ ಕರ್ನಾಟಕದ ವಿಳಾಸ: ಮತ್ತೊಂದು ಅಚ್ಚರಿ ಎಂದರೆ ರಾಮಚಂದ್ರ ಭಾರತಿ ಪತ್ತೆಯಾಗಿರುವ ಎರಡೂ ವಿಭಿನ್ನ ಪಾಸ್​ಕೋರ್ಟ್​ಗಳಲ್ಲಿ ಕರ್ನಾಟಕ ವಿಳಾಸವಿದೆ. ಒಂದು ಪಾಸ್‌ಪೋರ್ಟ್ ಸ್ವಾಮೀಜಿ ಶ್ರೀರಾಮಚಂದ್ರ ಅವರ ಹೆಸರಿನಲ್ಲಿದ್ದು, ಇದರಲ್ಲಿ ತಂದೆ ಹೆಸರು ಮಹಾಸ್ವಾಮಿ ಶ್ರೀಮಧ್ವ ಧರ್ಮದತ್ತ ಹಾಗೂ ಜನ್ಮ ದಿನಾಂಕ 1979ರ ಫೆಬ್ರವರಿ 12 ಮತ್ತು ನಿವಾಸವು ಪುತ್ತೂರು, ಕರ್ನಾಟಕ ಎಂದು ನಮೂದಿಸಲಾಗಿದೆ. ಈ ಪಾಸ್‌ಪೋರ್ಟ್​ಅನ್ನು 2019ರ ನವೆಂಬರ್ 8ರಂದು ನೀಡಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಭಾರತಿಯವರ ವಶದಿಂದ ವಶಪಡಿಸಿಕೊಂಡ ಮತ್ತೊಂದು ಪಾಸ್‌ಪೋರ್ಟ್​ಅನ್ನು 2010ರ ಜುಲೈ 11ರಂದು ನೀಡಲಾಗಿದೆ. ಇದು ಭರತ್‌ಕುಮಾರ್ ಶರ್ಮಾ ಎಂಬ ಹೆಸರಿನಲ್ಲಿದ್ದು, ತಂದೆ ಹೆಸರು ಶ್ರೀಕೃಷ್ಣಮೂರ್ತಿ ವೆಲಕುಂಜ ಹಾಗೂ ಜನ್ಮ ದಿನಾಂಕ 1988ರ ಫೆಬ್ರವರಿ 12 ಎಂದು ನಮೂದಿಸಲಾಗಿದೆ. ಇದರಲ್ಲಿ ಕರ್ನಾಟಕದ ಕೊಡಗಿನ ವಿಳಾಸವನ್ನು ತೋರಿಸಲಾಗಿದೆ ಎಂದು ತಿಳಿದು ಬಂದಿದೆ.

ಪಾಸ್​ಪೋರ್ಸ್​ಗಳಲ್ಲಿ ತಾಯಿ ಹೆಸರು ಒಂದೇ: ಕುತೂಹಲಕಾರಿ ಅಂಶ ಎಂದರೆ ಈ ಎರಡೂ ಪಾಸ್‌ಪೋರ್ಟ್‌ಗಳಲ್ಲಿ ತಾಯಿಯ ಹೆಸರು ಸರಸ್ವತಿ ವೆಲಕುಂಜ ಎಂದೇ ನಮೂದಿಸಲಾಗಿದೆ. ಆದ್ದರಿಂದ ಈ ಪಾಸ್‌ಪೋರ್ಟ್​ಗಳ ಅಸಲಿಯತ್ತು ಕುರಿತ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಈ ಬಗ್ಗೆ ಪಾಸ್‌ಪೋರ್ಟ್ ಅಧಿಕಾರಿಗಳಿಗೂ ಎಸ್​ಐಟಿ ಪತ್ರ ಬರೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಂಡೂರಿನ ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ದೂರಿನ ಆಧಾರದ ಮೇಲೆ ಅಕ್ಟೋಬರ್ 26ರಂದು ಶಾಸಕರ ಖರೀದಿ ಯತ್ನ ಸಂಬಂಧ ಪ್ರಕರಣ ದಾಖಲಾಗಿತ್ತು. ನವೆಂಬರ್ 10ರಂದು ರಾಜ್ಯ ಸರ್ಕಾರವು ಪ್ರಕರಣದ ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ.

ಹೈದರಾಬಾದ್ ನಗರ ಪೊಲೀಸ್ ಕಮಿಷನರ್ ಸಿವಿ ಆನಂದ್ ನೇತೃತ್ವದ ಎಸ್‌ಐಟಿಯಲ್ಲಿ ನಲ್ಗೊಂಡ ಎಸ್ಪಿ ರೆಮಾ ರಾಜೇಶ್ವರಿ, ಸೈಬರಾಬಾದ್ ಡಿಸಿಪಿ (ಅಪರಾಧ) ಕಲ್ಮೇಶ್ವರ ಶಿಂಗೇನವರ್ ಮತ್ತು ಶಂಶಾಬಾದ್ ಡಿಸಿಪಿ ಆರ್ ಜಗದೀಶ್ವರ್ ರೆಡ್ಡಿ ತನಿಖೆ ನಡೆಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಎಸ್‌ಐಟಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿಎಲ್ ಸಂತೋಷ್ ಮತ್ತು ಇತರ ಮೂವರನ್ನು ಆರೋಪಿಗಳೆಂದು ಹೆಸರಿಸಿದೆ.

ಇದನ್ನೂ ಓದಿ: ಕೆಸಿಆರ್‌ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಕರ್ನಾಟಕ ರಾಜಕೀಯವೂ ಪ್ರಸ್ತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.