ನಾಡಿನಾದ್ಯಂತ ಸಂಕ್ರಾಂತಿ ಸಂಭ್ರಮ; ಹಬ್ಬದ ಮಹತ್ವ, ಆಚರಣೆ ಹೀಗಿದೆ...

author img

By

Published : Jan 14, 2022, 1:49 AM IST

sankranti celebration speciality in india

ಸಮೃದ್ಧಿಯ ಸಂಕೇತ ಸಂಕ್ರಾಂತಿ ಹಬ್ಬವನ್ನು ನಾಡಿನಾದ್ಯಂತ ಇಂದು ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷತೆ, ಯಾವ ರಾಜ್ಯದಲ್ಲಿ ಯಾವ ಹೆಸರಿನಿಂದ ಆಚರಿಸುತ್ತಾರೆ ಹಾಗೂ ಇದರ ಮಹತ್ವದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹೈದರಾಬಾದ್‌: ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿಂದು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.

ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ. ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಆಚರಿಸುತ್ತಾರೆ.

ಈ ದಿನ ಶ್ರೀರಾಮನ ಪೂಜೆಯನ್ನು ಆಂಧ್ರದಲ್ಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ತಯಾರಿಸಿದ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿದ ವಲೆಯಲ್ಲಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ.

ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಪ್ರಕಾರ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುತ್ತಾರೆ.

ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು.

ಉತ್ತರದಲ್ಲೂ ನಾನಾ ಹೆಸರುಗಳಲ್ಲಿ ಆಚರಣೆ

ಸೂರ್ಯನು ಪಥ ಬದಲಿಸುವ ಹಾಗೂ ದೇಶದ ಹಲವು ಕಡೆಗಳಲ್ಲಿ ಕೊಯ್ಲು ಪ್ರಾರಂಭವಾಗುವ ಸಂದರ್ಭದಲ್ಲಿ ಮಕರ ಸಂಕ್ರಾಂತಿಯನ್ನು ಭೋಗಲಿ ಬಿಹು, ಪೊಂಗಲ್‌, ಉತ್ತರಾಯಣ ಹಾಗೂ ಪೌಷ್‌ ಎಂಬ ಹೆಸರುಗಳಿಂದ ಆಚರಿಸಲಾಗುತ್ತದೆ.

ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ(ಸಕ್ಕರೆ) ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಹೆಣ್ಣು ಮಕ್ಕಳು ತಮ್ಮ ಆಪ್ತರು, ನೆರೆ ಹೊರೆಯವರಿಗೆ ವಿಶೇಷ ಸಿಹಿಯನ್ನು ಹಂಚಿ ಸಂಭ್ರಮಿಸುತ್ತಾರೆ.

ಯಾವಾಗ ಸಂಕ್ರಾಂತಿ ಆಚರಣೆ ಉತ್ತಮ

ದೃಗ್‌ ಪಂಚಾಂಗದ ಪ್ರಕಾರ ಮಕರ ಸಂಕ್ರಾಂತಿ ಆಚರಣೆಯು ಇಂದು ನಡೆಯಲಿದೆ. ಆದರೆ ಕೆಲವು ಸ್ಥಳಗಳಲ್ಲಿ ನಾಳೆಯೂ ಮಾಡುತ್ತಾರೆ. ಜ್ಯೋತಿಷಿಗಳ ಪ್ರಕಾರ ಜ.14ರ ಶುಕ್ರವಾರದಂದು ಸೂರ್ಯ ರಾತ್ರಿ 8.49ಕ್ಕೆ ಮಕರ ರಾಶಿಯನ್ನು ಪ್ರವೇಶಿಸಿರುವುದರಿಂದ ಮಕರ ಸಂಕ್ರಾಂತಿಯ ಪುಣ್ಯಕಾಲವು ನಾಳೆ ಮಧ್ಯಾಹ್ನ 12.49ರವರೆಗೆ ಇರುತ್ತದೆ. ಹೀಗಾಗಿ ನಾಳೆಯೂ ಕೆಲವೆಡೆ ಸಂಕ್ರಾಂತಿ ಆಚರಿಸುತ್ತಾರೆ.

ಮಕರ ಜ್ಯೋತಿ ದರ್ಶನ

ಇನ್ನು, ಹಬ್ಬದ ಪ್ರಯುಕ್ತ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಭಕ್ತರು ಪುಣ್ಯ ಸ್ನಾವನ್ನು ಮಾಡುತ್ತಾರೆ. ಈ ಸಂಪ್ರದಾಯವನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಪಾಲಿಸಲಾಗುತ್ತದೆ. ಇದೇ ದಿನದಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಇಂದು ಸಂಜೆ ಮಕರ ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಜ್ಯೋತಿ ದರ್ಶನ ಪಡೆಯುವುದು ವಾಡಿಕೆ.

ಮಕರ ಸಂಕ್ರಾಂತಿ ಅರ್ಥ...

ಮಕರ ಸಂಕ್ರಾಂತಿ ಎಂದರೆ ಮಕರ ಎಂಬುದು ಒಂದು ರಾಶಿ. ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಸೂರ್ಯ ದೇವನ ಚಲನೆ ಎಂಬ ಅರ್ಥವನ್ನು ಕೊಡುತ್ತದೆ. ಸೂರ್ಯ ಧನೂರಾಶಿಯಿಂದ ಮಕರ ರಾಶಿಯತ್ತ ಚಲಿಸುತ್ತಾನೆ. ಸಂಕ್ರಾಂತಿಯನ್ನು ಸರಳವಾಗಿ ಹೇಳುವುದಾದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದೆಂದು ಅರ್ಥ. ಹೀಗಾಗಿ ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.