ಉದ್ಧವ್​ ಠಾಕ್ರೆಗೆ ರೆಬೆಲ್ಸ್​ ಸೆಡ್ಡು: ಹೊಸ ಶಿವಸೇನಾ ನಾಯಕತ್ವ ಹುಟ್ಟುಹಾಕಿದ ಬಂಡಾಯ ಶಾಸಕರು

author img

By

Published : Jun 23, 2022, 8:11 PM IST

Updated : Jun 23, 2022, 8:44 PM IST

Rebel Shiv Sena MLAs unanimously chose Eknath Shinde their leader in Guwahati

ಏಕನಾಥ ಶಿಂದೆ ತಮ್ಮ ನಾಯಕ ಎಂದು ಬಂಡಾಯ ಶಾಸಕರು ಅವಿರೋಧವಾಗಿ ಆಯ್ಕೆ ಮಾಡಿ ಉದ್ಧವ್​ ಠಾಕ್ರೆ ಅವರಿಗೆ ಪರ್ಯಾಯ ನಾಯಕತ್ವವನ್ನು ಸೃಷ್ಟಿಸಿದ್ದಾರೆ.

ಮುಂಬೈ/ಗುವಾಹಟಿ: ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದ ಶಿವಸೇನೆ ಶಾಸಕರು ಪ್ರತ್ಯೇಕ ನಾಯಕತ್ವವನ್ನು ಹುಟ್ಟು ಹಾಕಿದ್ದಾರೆ. ಪ್ರಬಲ ನಾಯಕ ಎಂದೇ ಕರೆಯಲಾಗುವ ಏಕನಾಥ ಶಿಂದೆ 'ನಮ್ಮ ನಾಯಕ' ಎಂದು ರೆಬೆಲ್​ ಶಾಸಕರು ಘೋಷಿಸಿದ್ದಾರೆ.

ಶಿವಸೇನೆ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಸುಮಾರು 30 ಶಾಸಕರು ಬಿಜೆಪಿ ಆಡಳಿತವಿರುವ ಅಸ್ಸೋಂದಲ್ಲಿ ಬೀಡುಬಿಟ್ಟಿದ್ದಾರೆ. ಈ ಮೊದಲು ಗುಜರಾತ್​ನಲ್ಲಿ ಮೊಕ್ಕಾಂ ಹೂಡಿದ್ದ ಶಿವಸೈನಿಕರು ನಂತರ ಅಸ್ಸೋಂಗೆ ತಮ್ಮ ವಸತಿ ಬದಲಿಸಿದ್ದಾರೆ. ಇಂದು ಏಕನಾಥ ಶಿಂದೆ ತಮ್ಮ ನಾಯಕ ಎಂದು ಅವಿರೋಧವಾಗಿ ಆಯ್ಕೆ ಮಾಡಿ, ಉದ್ಧವ್​ ಠಾಕ್ರೆಗೆ ಪರ್ಯಾಯ ನಾಯಕತ್ವವನ್ನು ಸೃಷ್ಟಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿರುವ ಏಕನಾಥ ಶಿಂದೆ, ಆ ರಾಷ್ಟ್ರೀಯ ಪಕ್ಷದವರು (ಬಿಜೆಪಿಯವರು) ನಾನು ತೆಗೆದುಕೊಂಡಿರುವ ನಿರ್ಧಾರ ಐತಿಹಾಸಿಕ ಎಂದು ಹೇಳಿದ್ದಾರೆ. ನನಗೆ ಅಗತ್ಯವಿರುವಾಗ ಅವರು ಹಾಜರಾಗುತ್ತಾರೆ ಎಂದು ಹೇಳಿದ್ದಾರೆ.

ಮುಂಬೈಗೆ ಮರಳಿದರೆ ಪರಿಸ್ಥಿತಿ ಬದಲು: ಮೈತ್ರಿ ಸರ್ಕಾರದಿಂದ ಹೊರಬರಲು ಸಿದ್ಧ ಎಂಬ ಶಿವಸೇನೆ ನಾಯಕ ಸಂಜಯ್​ ರಾವತ್​ ಹೇಳಿಕೆ ಬೆನ್ನಲ್ಲೆ ಪಾಲುದಾರ ಪಕ್ಷಗಳಾದ ಎನ್​ಸಿಪಿ ಮತ್ತು ಕಾಂಗ್ರೆಸ್​​ ನಾಯಕರು ಸಭೆ ನಡೆಸಿದ್ದಾರೆ. ಪಕ್ಷದ ಸಭೆ ನಂತರ ಮಾತನಾಡಿದ ಎನ್​ಸಿಪಿ ವರಿಷ್ಠ ಶರದ್​​ ಪವಾರ್​, ಈಗಲೂ ಮಹಾವಿಕಾಸ್ ಆಘಾಡಿ ಮೈತ್ರಿಕೂಟ ಸಿಎಂ ಉದ್ಧವ್ ಠಾಕ್ರೆ ಬೆಂಬಲಕ್ಕಿದೆ. ಉದ್ಧವ್​ ಅವರ ನೇತೃತ್ವದ ಸರ್ಕಾರವು ಅಲ್ಪಮತಕ್ಕೆ ಕುಸಿದಿದೆಯೇ ಎಂಬುದನ್ನು ಸಾಬೀತುಪಡಿಸುವ ಮಾರ್ಗವೆಂದರೆ ವಿಧಾನಸಭೆ. ಅಲ್ಲಿಯೇ ಯಾರಿಗೆ ಬಹುಮತ ಇದೆ ಎಂದು ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೋಸ್ಕರ ಮಹಾರಾಷ್ಟ್ರ ಸರ್ಕಾರದ ಅಸ್ಥಿರ ಯತ್ನ: ಖರ್ಗೆ

ಅಲ್ಲದೇ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರು ವಿಧಾನಸೌಧಕ್ಕೆ ಹಾಜರಾಗಬೇಕು. ಒಂದೊಮ್ಮೆ ಶಾಸಕರು ಮುಂಬೈಗೆ ಮರಳಿದರೆ ಪರಿಸ್ಥಿತಿಯೇ ಬದಲಾಗಿದೆ ಎಂದಿರುವ ಶರದ್​​ ಪವಾರ್​, ಶಿವಸೇನೆ ಶಾಸಕರನ್ನು ಗುಜರಾತ್​, ಅಸ್ಸೋಂಗೆ ಯಾರು ಕರೆದುಕೊಂಡು ಹೋಗಿದ್ದಾರೆ ಎಂಬುವುದೂ ಎಲ್ಲರಿಗೂ ಗೊತ್ತಿದೆ. ಶಾಸಕರಿಗೆ ಯಾರೆಲ್ಲ ನೆರವು ನೀಡುತ್ತಿದ್ದಾರೆ ಎಂದು ಅವರ ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ. ಅಸ್ಸೋಂ ಸರ್ಕಾರ ಬಂಡಾಯ ಶಾಸಕರಿಗೆ ಸಹಾಯ ಮಾಡುತ್ತಿದೆ ಎಂದರು.

ಇದನ್ನೂ ಓದಿ: ಮಹಾರಾಷ್ಟ್ರ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳಿಸಿ, ಆತಿಥ್ಯ ನೀಡುತ್ತೇವೆ: ಸಿಎಂ ಮಮತಾ

ಇದೇ ವೇಳೆ ಎನ್​ಸಿಪಿ ಮುಖಂಡ, ಡಿಸಿಎಂ ಅಜಿತ್​ ಪವಾರ್​ ಮಾತನಾಡಿ, ಮೈತ್ರಿ ಸರ್ಕಾರದಿಂದ ಹೊರ ಬರಲು ಶಿವಸೇನೆ ಸಿದ್ಧ ಎಂದು ಸಂಜಯ್​ ರಾವತ್​ ಯಾಕೆ ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ನಾನು ಸಿಎಂಗೆ ಕರೆ ಮಾಡಿ ಕೇಳುತ್ತೇನೆ. ಶಿವಸೇನೆಯ ಬಂಡಾಯ ಶಾಸಕರನ್ನು ವಾಪಸ್ ಕರೆತರಲು ರಾವತ್ ಈ ಹೇಳಿಕೆ ನೀಡಿದ್ದಾರೆಯೇ ಎಂಬ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್​: ದಿಢೀರ್​ ಸಭೆ ಕರೆದ ಕಾಂಗ್ರೆಸ್-ಎನ್​ಸಿಪಿ

Last Updated :Jun 23, 2022, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.