ಫೆ.5ರಂದು ಹೈದರಾಬಾದ್‌ನಲ್ಲಿ ಪ್ರಧಾನಿಯಿಂದ ರಾಮಾನುಜರ ಬೃಹತ್‌ ಪ್ರತಿಮೆ ಅನಾವರಣ

author img

By

Published : Jan 14, 2022, 3:55 PM IST

Statue of Equality

ಸುಮಾರು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ 216 ಅಡಿ ಎತ್ತರದ ಶ್ರೀ ರಾಮಾನುಜರ 'ಸಮಾನತೆಯ ಪ್ರತಿಮೆ'ಯನ್ನು ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

ಹೈದರಾಬಾದ್ (ತೆಲಂಗಾಣ): ಹೈದರಾಬಾದ್ ಹೊರವಲಯದಲ್ಲಿ ಮುಂಚಿಂತಲ್‌ ಪ್ರದೇಶದಲ್ಲಿರುವ ಚಿನ್ನ ಜೀಯರ್ ಆಶ್ರಮವು ರಾಮಾನುಜಾಚಾರ್ಯರ 1,000ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಆಚರಣೆಗೆ ಸಜ್ಜಾಗಿದೆ. ಫೆಬ್ರವರಿ 2 ರಿಂದ 14 ರವರೆಗೆ ನಡೆಯಲಿರುವ ಸಮಾರಂಭದಲ್ಲಿ 216 ಅಡಿ ಎತ್ತರದಲ್ಲಿ ನಿರ್ಮಿಸಲಾದ ರಾಮಾನುಜರ ಪ್ರತಿಮೆ ಅಥವಾ 'ಸಮಾನತೆಯ ಪ್ರತಿಮೆ'ಯನ್ನು ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯವು ಪ್ರಧಾನಿಯವರ ವೇಳಾಪಟ್ಟಿಯನ್ನು ದೃಢಪಡಿಸಿದ್ದು, ಫೆಬ್ರವರಿ 5 ರಂದು ಮಧ್ಯಾಹ್ನ 3.30ಕ್ಕೆ ಮೋದಿ ಆಶ್ರಮವನ್ನು ತಲುಪಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದೆ. ನಂತರ ನಡೆಯುವ ಹೋಮಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದು, ಇವರೊಂದಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಕೂಡ ಇರಲಿದ್ದಾರೆ.

34 ಎಕರೆ ಪ್ರದೇಶದಲ್ಲಿ ಸುಮಾರು ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲಿ 108 ಮಾದರಿ ದೇವಾಲಯಗಳು ಮತ್ತು 144 ಯಾಗ ಶಾಲೆಗಳಿವೆ. ಪ್ರತಿ ಯಾಗ ಶಾಲೆಯಲ್ಲಿ ಒಂಬತ್ತು ಹೋಮ ಕುಂಡಗಳಿರುತ್ತವೆ. ಫೆ.5 ರಂದು ದೇಶದ ವಿವಿಧೆಡೆಯಿಂದ ಸುಮಾರು 5,000 ಪುರೋಹಿತರು ಮತ್ತು ವೇದ ಪಂಡಿತರು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾಗ ಶಾಲೆಯ ಹೊರಗೆ ಪ್ರವಾಸಿಗರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವವರನ್ನು ಹೊರತುಪಡಿಸಿ ಇತರರಿಗೆ ಯಾಗ ಶಾಲೆ ಪ್ರವೇಶಿಸುವಂತಿಲ್ಲ.

ಇದನ್ನೂ ಓದಿ: ಅಯ್ಯಪ್ಪನಿಗೆ ವಜ್ರದ ಕಿರೀಟ ಅರ್ಪಿಸಿದ ಆಂಧ್ರದ ಭಕ್ತ.. ಕಾರಣ ಇಷ್ಟೇ..

ರಾಮಾನುಜರು 11ನೇ ಶತಮಾನದ ಸಮಾಜ ಸುಧಾರಕ, ಸಂತ, ವಿದ್ವಾಂಸ ಹಾಗೂ ದಾರ್ಶನಿಕ ಮತ್ತು ಶ್ರೀ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಆಗಿದ್ದರು. ಹಿಂದೂ ಧರ್ಮದೊಳಗಿನ ಶ್ರೀ ವೈಷ್ಣವ ಸಂಪ್ರದಾಯದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರಾಗಿದ್ದವರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.