ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ: ಯುವ ಶಕ್ತಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

author img

By

Published : Jan 12, 2023, 6:05 PM IST

Updated : Jan 12, 2023, 6:39 PM IST

PM Modi inaugurates 26th National Youth Festival in Hubbali

ಹುಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ 26ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಹುಬ್ಬಳ್ಳಿ: ಭಾರತವು ಯುವಕರ ದೇಶವಾಗಿದೆ. ಜಗತ್ತಿನಲ್ಲಿ ಹೆಚ್ಚಿನ ಯುವಕರನ್ನು ಹೊಂದಿದ ರಾಷ್ಟ್ರವಾಗಿದ್ದು, ಭಾರತೀಯ ಯುವಕರ ಪ್ರತಿಭೆಯನ್ನು ಕಂಡು ಜಗತ್ತು ಬೆರಗುಗೊಳ್ಳುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಹೆಣ್ಣು ಮಕ್ಕಳು ಸಹ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದರು.

ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಪ್ರಧಾನಿ ಉದ್ಘಾಟಿಸಿದರು. ನಂತರ ತಮ್ಮ ಭಾಷಣ ಆರಂಭಿಸಿದ ಅವರು, ಮೂರು ಸಾವಿರ ಮಠ, ಸಿದ್ಧರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು. ರಾಣಿ ಚೆನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು, ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು.

ಕರ್ನಾಟಕದ ಈ ಕ್ಷೇತ್ರವು ತನ್ನ ಪರಂಪರೆ, ಸಂಸ್ಕೃತಿ, ಜ್ಞನಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅನೇಕರಿಗೆ ಜ್ಞಾನ ಪೀಠ ಪುರಸ್ಕಾರದಿಂದ ಸ್ಮಾನಿಸಲಾಗಿದೆ. ಅಲ್ಲದೇ, ಈ ಕ್ಷೇತ್ರವು ದೇಶಕ್ಕೆ ಮಹಾನ್​ ಸಂಗೀತಕಾರರನ್ನು ನೀಡಿದೆ. ಪಂಡಿತ್​ ಕುಮಾರ ಗಂಧರ್ವ, ಪಂಡಿತ್​ ಬಸವರಾಜ ರಾಜಗುರು, ಪಂಡಿತ್​ ಮಲ್ಲಿಕಾರ್ಜುನ ಮನ್ಸೂರ್, ಭಾರತ ರತ್ನ ಭೀಮ್​ಸೇನ್​ ಜೋಷಿ, ಗಂಗೂಬಾಯಿ ಹಾನಗಲ್ ಅವರಿಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿದರು.

ವಿವೇಕಾನಂದ - ಕರ್ನಾಟಕಕ್ಕೆ ನಂಟಿತ್ತು ಎಂದ ಪ್ರಧಾನಿ: ಯುವ ಸಮೂಹವನ್ನು ಉದ್ದೇಶಿಸಿ ಮಾತು ಮುಂದುವರೆಸಿದ ಪ್ರಧಾನಿ ಮೋದಿ, ಸ್ವಾಮಿ ವಿವೇಕಾನಂದರ ಬಗ್ಗೆ ಸ್ಮರಿಸಿದರು. ವಿವೇಕಾನಂದರ ಅವರಿಗೆ ಕರ್ನಾಟಕದೊಂದಿಗೆ ಅದ್ಭುತವಾದ ಸಂಬಂಧ ಇತ್ತು. ತಮ್ಮ ಜೀವಿತಾವಧಿಯಲ್ಲಿ ಕರ್ನಾಟಕದ ಯಾತ್ರೆ ಮಾಡಿದ್ದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಭೇಟಿ ನೀಡಿದ್ದರು. ಈ ಯಾತ್ರೆ ಮೂಲಕ ಅವರ ಜೀವನಕ್ಕೆ ಹೊಸ ದೆಸೆ ನೀಡಿತ್ತು. ಮೈಸೂರು ಮಹಾರಾಜರು ವಿವೇಕಾನಂದರ ಚಿಕಾಗೋ ಯಾತ್ರೆಗೆ ಸಹಾಯ ಮಾಡಿದ್ದರು ಎಂದರು.

ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು. ಹಾಗೆ, ರಾಣಿ ಕಿತ್ತೂರು ಚೆನ್ನಮ್ಮ ದೇಶದ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ. ಕಠಿಣ ಪರಿಸ್ಥಿತಿ ಸಂದರ್ಭದಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ಚೆನ್ನಮ್ಮ ನೇತೃತ್ವ ಕೊಟ್ಟಿದ್ದರು. ಚೆನ್ನಮ್ಮನವರ ಬಂಟ, ವೀರ ಯೋಧ ರಾಯಣ್ಣ ಬ್ರಿಟಿಷ್​ ಸೈನ್ಯವನ್ನು ಎದುರಿಸಿದ್ದರು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬೇಕು: ಯುವಕರಿಗೆ ಸ್ವಾಮಿ ವಿವೇಕಾನಂದರವರು ಪ್ರೇರಣೆ ಆಗಿದ್ದಾರೆ. ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ ಎಂದು ವಿವೇಕಾನಂದ ಕರೆ ನೀಡಿದ್ದಾರೆ. ಯುವ ಜನ ಶಕ್ತಿಯಿಂದ ಭವಿಷ್ಯ ಮತ್ತು ರಾಷ್ಟ್ರವನ್ನು ನಿರ್ಮಾಣ ಮಾಡುವುದ ಸುಲಭವಾಗುತ್ತದೆ ಎಂದು ಹೇಳಿದ್ದರು. ದೇಶದ ಅಮೃತ ಕಾಲದ ಸಂದರ್ಭದಲ್ಲಿ ನಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಂಡು, ನಮ್ಮ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಭಾರತದ ಪ್ರತಿಯೊಂದು ಭಾಗದಲ್ಲೂ ನಮ್ಮ ಯುವಕರ ಪ್ರತಿಭೆ ಅಸಾಧಾರಣವಾಗಿದೆ ಎಂದು ಹೇಳಿದರು.

ಜನವರಿ 16ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಯನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್​ ಜೋಶಿ ಮತ್ತು ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಐದು ದಿನಗಳ ಯುವ ಜನೋತ್ಸವದಲ್ಲಿ ದೇಶದಾದ್ಯಂತದ 7,500ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಯುವ ಜನೋತ್ಸವದ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಹಾವೇರಿಯ ಏಲಕ್ಕಿ ಹಾರ, ಗರಗದ ರಾಷ್ಟ್ರೀಯ ಧ್ವಜ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ವಿತರಣೆ ಮಾಡುವ ಮೂಲಕ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಇದನ್ನೂ ಓದಿ: ಪ್ರಧಾನಿ ರೋಡ್​ ಶೋ ವೇಳೆ ಭದ್ರತಾ ಲೋಪ: ಮೋದಿಗೆ ಹಾರ ಹಾಕಲು ಬಂದ ಯುವಕ! ವಿಡಿಯೋ..

Last Updated :Jan 12, 2023, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.