ವಾಹನಗಳಿಗಾಗಿರುವ ಹೆದ್ದಾರಿಗಳಲ್ಲಿ ಪಾದಚಾರಿಗಳು ಸಂಚರಿಸಬಾರದು: ಸುಪ್ರೀಂ ಕೋರ್ಟ್

ವಾಹನಗಳಿಗಾಗಿರುವ ಹೆದ್ದಾರಿಗಳಲ್ಲಿ ಪಾದಚಾರಿಗಳು ಸಂಚರಿಸಬಾರದು: ಸುಪ್ರೀಂ ಕೋರ್ಟ್
ಪಾದಚಾರಿಗಳು ಹೆದ್ದಾರಿಗಳಲ್ಲಿ ಸಂಚರಿಸಬಾರದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಹೆದ್ದಾರಿಗಳಲ್ಲಿ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿತು.
ನವದೆಹಲಿ: ವಾಹನ ಸಂಚಾರಕ್ಕೆ ಉದ್ದೇಶಿಸಿರುವ ಹೆದ್ದಾರಿಗಳಲ್ಲಿ ಪಾದಚಾರಿಗಳು ನಡೆದಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೆದ್ದಾರಿಗಳಲ್ಲಿ ಪಾದಚಾರಿಗಳ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ನಿರಾಕರಿಸಿದ ಕೋರ್ಟ್, ಈ ಕುರಿತು ಮೇಲಿನಂತೆ ಸೂಚನೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮೊದಲು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಅರ್ಜಿ ವಜಾಗೊಳಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯನ್ನು ಸಂಪರ್ಕಿಸಿ ಎಂದಿತ್ತು. ಗುಜರಾತ್ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಹೌದು, ಪಾದಚಾರಿಗಳು ಹೈವೇಗಳಲ್ಲಿ ಹೇಗೆ ಬರುತ್ತಾರೆ?. ಅವರಲ್ಲಿ ಶಿಸ್ತು ಇರಬೇಕು. ಅವರು ಹೆದ್ದಾರಿಗಳಲ್ಲಿ ಸಂಚರಿಸಕೂಡದು. ಜಗತ್ತಿನಲ್ಲೆಲ್ಲೂ ಈ ರೀತಿ ಹೆದ್ದಾರಿಗಳಲ್ಲಿ ನಡೆಯುವವರು ಸಿಗುವುದಿಲ್ಲ. ಭವಿಷ್ಯದಲ್ಲಿ ಪಾದಚಾರಿಗಳಿಗೆ ಹೆದ್ದಾರಿಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕೆಂದು ಅರ್ಜಿ ಹಾಕುತ್ತಾರೆ. ಅದೆಲ್ಲ ಹೇಗೆ ಸಾಧ್ಯ ಎಂದು ಪೀಠ ಅರ್ಜಿದಾರರನ್ನೇ ಪ್ರಶ್ನಿಸಿತು. ಜನರು ನಿಯಮಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯವು ಅವರನ್ನು ಹೇಗೆ ರಕ್ಷಿಸಬೇಕು ಎಂದು ನ್ಯಾಯಾಲಯ ಖಡಕ್ ಆಗಿಯೇ ಕೇಳಿತು.
ಹೆದ್ದಾರಿಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರೆ, ಪಾದಚಾರಿಗಳು ಇಲ್ಲದಿದ್ದರೆ ಇಂತಹ ಘಟನೆಗಳು ಸಂಭವಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ದೇಶದಲ್ಲಿ ಹೆದ್ದಾರಿಗಳು ಹೆಚ್ಚಿವೆ. ಆದರೆ, ನಮ್ಮಲ್ಲಿ ಶಿಸ್ತು ಬೆಳೆದಿಲ್ಲ. ಇದು ಸಂಪೂರ್ಣ ಅಸಂಬದ್ಧ ಅರ್ಜಿ. ಇಂಥವರಿಗೆ ಖಂಡಿತಾ ದಂಡ ವಿಧಿಸಬೇಕು ಎಂದು ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿತು. ಇದೇ ವೇಳೆ, ಸಂಬಂಧಪಟ್ಟ ಸಚಿವಾಲಯವನ್ನು ಸಂಪರ್ಕಿಸಲು ಹೈಕೋರ್ಟ್ ನಿಮಗೆ ಅವಕಾಶ ನೀಡಿದೆ ಎಂದು ಪೀಠವು ಅರ್ಜಿದಾರರಿಗೆ ಹೇಳಿದೆ.
ಪಾದಚಾರಿ ಮಾರ್ಗ ವಿಸ್ತರಣೆಗೆ ಹೈಕೋರ್ಟ್ ನಿರ್ಬಂಧ: ಬೆಂಗಳೂರು ನಗರದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ನವೀಕರಣ ಕಾಮಗಾರಿ ವೇಳೆ ಪಾದಚಾರಿ ಮಾರ್ಗವನ್ನು 40 ಅಡಿ ಅಗಲಕ್ಕೆ ವಿಸ್ತರಿಸುವ ಕಾರ್ಯಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿದೆ. ಗಾಂಧಿ ಬಜಾರ್ನ ಅಂಗಡಿ ಮಳಿಗೆ ಮಾಲೀಕ ಎಲ್.ಗುಂಡುರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶಿಸಿದೆ.
