ಕ್ರೀಡಾ ಕ್ಷೇತ್ರವು ಸಾಕಷ್ಟು ತರಬೇತಿ ಸೌಲಭ್ಯಗಳನ್ನು ಹೊಂದಿಲ್ಲ: ಈಜುಪಟು ಸಜನ್ ಪ್ರಕಾಶ್

ಕ್ರೀಡಾ ಕ್ಷೇತ್ರವು ಸಾಕಷ್ಟು ತರಬೇತಿ ಸೌಲಭ್ಯಗಳನ್ನು ಹೊಂದಿಲ್ಲ: ಈಜುಪಟು ಸಜನ್ ಪ್ರಕಾಶ್
Olympian Sajan Prakash: ವಿಶ್ವ ಮಟ್ಟದ ಪ್ರದರ್ಶನಕ್ಕೆ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಮಟ್ಟದ ತರಬೇತಿ ಮತ್ತು ಸೌಲಭ್ಯಗಳು ಅಸಮರ್ಪಕವಾಗಿದೆ ಎಂದು ಭಾರತದ ಈಜುಪಟು ಒಲಿಂಪಿಯನ್ ಸಜನ್ ಪ್ರಕಾಶ್ ಹೇಳಿದ್ದಾರೆ.
ತಿರುವನಂತಪುರಂ (ಕೇರಳ) : ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ತರಬೇತಿ ಮತ್ತು ಸೌಲಭ್ಯಗಳನ್ನು ಸುಧಾರಿಸುವ ಅಗತ್ಯವಿದೆ. ಭಾರತವು ಏಷ್ಯನ್ ಗೇಮ್ಸ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಿದೆ. ಆದರೆ ಇದು ಒಲಿಂಪಿಕ್ಸ್ಗೆ ಸಾಕಾಗುವುದಿಲ್ಲ. ನಾವು ಒಲಿಂಪಿಕ್ಸ್ಗಾಗಿ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ, ಕ್ರೀಡಾಪಟುವಿನ ಪ್ರದರ್ಶನ ಇನ್ನೂ ವಿಶ್ವ ಗುಣಮಟ್ಟಕ್ಕೆ ಏರಿಲ್ಲ. ಇನ್ನೂ ಕೆಲ ಸೌಲಭ್ಯಗಳಲ್ಲಿ ಸುಧಾರಣೆ ಮಾಡಬೇಕಿದೆ ಎಂದು ಈಜುಪಟು ಒಲಿಂಪಿಯನ್ ಸಜನ್ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಿರುವನಂತಪುರಂನಲ್ಲಿ ಮಾತನಾಡಿದ ಅವರು, "ಭಾರತದಲ್ಲಿ ಕ್ರೀಡಾ ಪಟುಗಳಿಗೆ ಸಾಕಷ್ಟು ತರಬೇತಿ ಸೌಲಭ್ಯಗಳಿಲ್ಲ. ತರಬೇತಿ ಸೌಲಭ್ಯಗಳು ಸೀಮಿತವಾಗಿದ್ದರೂ ಸಹ ಎಲ್ಲರು ಆಶಾವಾದಿಗಳಾಗಿರುವುದರಿಂದ ಒಲಿಂಪಿಕ್ ಅರ್ಹತೆಗಾಗಿ ತರಬೇತಿ ಪಡೆಯುತ್ತಿದ್ದಾರೆ" ಎಂದು ಹೇಳಿದರು.
ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಪರವಾಗಿ ಆಟವಾಡಿ ಪದಕಗಳನ್ನು ಮುಡಿಗೇರಿಸಿಕೊಂಡಿರುವ ಒಲಿಂಪಿಯನ್ ಸಜನ್ ಪ್ರಕಾಶ್ ಅವರು ಪ್ಯಾರಿಸ್ನಲ್ಲಿ 2024 ರಲ್ಲಿ ನಡೆಯಲಿರುವ ಒಲಿಂಪಿಕ್ಸ್ 200 ವೀಟರ್ ಬಟರ್ಫ್ಲೈ ಸ್ಟ್ರೋಕ್ ಸ್ಪರ್ಧೆಯನ್ನು ಗೆಲ್ಲಲು ಸಿದ್ಧರಾಗಿದ್ದಾರೆ. 10 ತಿಂಗಳ ತರಬೇತಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲು ತಯಾರಿ ನಡೆಸುತ್ತಿರುವ ಭಾರತದ ಹೆಮ್ಮೆಯ ತಾರೆ ಈಟಿವಿ ಭಾರತದ ಜೊತೆ ಅಭಿಪ್ರಾಯ ಹಂಚಿಕೊಂಡರು.
"ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ನಡುವೆ ಬಹಳ ವ್ಯತ್ಯಾಸವಿದೆ. ಯಶಸ್ಸಿಗೆ ಇನ್ನಷ್ಟು ಸಿದ್ಧತೆಗಳು ಅಗತ್ಯ. ಭಾರತೀಯ ಕ್ರೀಡಾಪಟುಗಳಿಗೆ ತರಬೇತಿ ವಿಧಾನಗಳು, ತರಬೇತಿ ಪರಿಸರ ಮತ್ತು ಸೌಲಭ್ಯಗಳು ಮತ್ತಷ್ಟು ಸುಧಾರಿಸಬೇಕು. ಅಥ್ಲೆಟಿಕ್ಸ್ ಇನ್ನೂ ವಿಶ್ವದ ಗುಣಮಟ್ಟವನ್ನು ಹೊಂದಿಲ್ಲ. ಈಜು ಕ್ರೀಡಾ ಪಟುಗಳಿಗೆ ರಾಷ್ಟ್ರೀಯ ಈಜು ತರಬೇತಿ ಕೇಂದ್ರದಂತಹ ಹೆಚ್ಚಿನ ತರಬೇತಿ ಕೇಂದ್ರಗಳ ಅಗತ್ಯವಿದೆ" ಎಂದರು.
