Punjab Polls: ಪಂಜಾಜ್ ಚುನಾವಣೆಯಲ್ಲಿ ಇದೊಂದು ಭಾಗದಲ್ಲಿ ಗೆದ್ದರೆ ಅಧಿಕಾರ ಶತಸಿದ್ಧ..

author img

By

Published : Jan 29, 2022, 9:26 AM IST

Updated : Jan 29, 2022, 9:35 AM IST

'Malwa Region' decides the future of Punjab Vidhan Sabha!

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾಳ್ವಾ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದ್ದು, ಈ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸುವ ಪಕ್ಷ ಅನಾಯಾಸವಾಗಿ ಅಧಿಕಾರಕ್ಕೆ ಏರುವುದು ಖಚಿತ. ಹೇಗೆ ಅಂತೀರಾ?..

ಚಂಡೀಗಢ(ಪಂಜಾಬ್): ಈಗ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಎಲ್ಲ ಪಕ್ಷಗಳ ಗುರಿ. ಈ ಪಂಚರಾಜ್ಯಗಳ ಚುನಾವಣೆಗೆ ಆ ರಾಜ್ಯದ ಭವಿಷ್ಯವನ್ನು ಮಾತ್ರವಲ್ಲದೇ, ಮುಂದಿನ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬುದನ್ನೂ ನಿರ್ಧರಿಸುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠ ಪಕ್ಷಗಳಲ್ಲಿದೆ.

ಪಂಜಾಬ್​ನಲ್ಲೂ ಇಂಥದ್ದೇ ವಾತಾವರಣವಿದೆ. ಬಹುತೇಕ ಎಲ್ಲ ಪಕ್ಷಗಳು ಜಿದ್ದಾಜಿದ್ದಿನಲ್ಲಿವೆ. ಯಾವುದಾದರೂ ಒಂದು ರಾಜ್ಯದಲ್ಲಿ ಚುನಾವಣೆಯಾದರೆ, ಯಾವುದಾದರೂ ಒಂದು ಪ್ರದೇಶ ಅಥವಾ ಒಂದು ವರ್ಗದ ಅಥವಾ ಒಂದು ಜಾತಿಯ ಪ್ರಾಬಲ್ಯ ಒಮ್ಮೊಮ್ಮೆ ನಿರ್ಣಾಯಕವಾಗುತ್ತದೆ. ಪಂಜಾಬ್​​ನ ಈ ಬಾರಿಯ ಚುನಾವಣೆಯಲ್ಲಿ ಒಂದು ಪ್ರದೇಶ ನಿರ್ಣಾಯಕವಾಗಲಿದೆ ಎಂದು ರಾಜಕೀಯ ತಜ್ಞರು ಹೇಳುವ ಮಾತು. ಆ ಪ್ರದೇಶವೇ ಮಾಳ್ವಾ..

ಮಾಳ್ವಗೆ ಏಕೆ ಅಷ್ಟೊಂದು ಮಹತ್ವ?: ಪಂಜಾಬ್‌ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಳ್ವ ಪ್ರಾಂತ್ಯದಲ್ಲಿ 69 ವಿಧಾನಸಭಾ ಕ್ಷೇತ್ರಗಳಿವೆ. ಮಾಜಾ ಪ್ರಾಂತ್ಯದಲ್ಲಿ 25 ಮತ್ತು ದೋಬಾ ಪ್ರಾಂತ್ಯದಲ್ಲಿ 23 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಮಾಳ್ವ ವಿಧಾನಸಭಾ ಚುನಾವಣೆಯನ್ನು ಭವಿಷ್ಯ ನಿರ್ಧಾರ ಮಾಡುತ್ತದೆ ಎಂದರೆ ನಿಜಕ್ಕೂ ತಪ್ಪಾಗುವುದಿಲ್ಲ. ಅಂದರೆ ಪಂಜಾಬ್​ನಲ್ಲಿ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಒಂದು ಪಕ್ಷಕ್ಕೆ 59 ಕ್ಷೇತ್ರಗಳಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಮಾಳ್ವಾ ಪ್ರಾಂತ್ಯವೊಂದರಲ್ಲೇ 69 ಸ್ಥಾನಗಳಿದ್ದು, ಅದರ ಮಹತ್ವ ನೀವೇ ಅಂದಾಜಿಸಿಕೊಳ್ಳಿ..

2012ರಲ್ಲಿ ಚುನಾವಣೆಯಲ್ಲಿ ಹೀಗಿತ್ತು ಬಲಾಬಲ: ಪಂಜಾಬ್​ನಲ್ಲಿ 2012ರಲ್ಲಿ ಎಸ್​ಎಡಿ ಅಥವಾ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರವಿತ್ತು. ಮಾಳ್ವ ಪ್ರಾಂತ್ಯದಲ್ಲಿ ಅಕಾಲಿದಳ 34, ಕಾಂಗ್ರೆಸ್ 31, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಮಾಜಾ ಪ್ರಾಂತ್ಯದಲ್ಲಿ ಅಕಾಲಿದಳ 11, ಕಾಂಗ್ರೆಸ್ 9 ಮತ್ತು ಬಿಜೆಪಿ 5 ಮತ್ತು ದೋಬಾ ಪ್ರಾಂತ್ಯದಲ್ಲಿ ಅಕಾಲಿದಳಕ್ಕೆ 11, ಕಾಂಗ್ರೆಸ್ 6 ಮತ್ತು ಬಿಜೆಪಿ 5 ಸ್ಥಾನಗಳನ್ನು ಗಳಿಸಿತ್ತು. ಅಕಾಲಿದಳಕ್ಕೆ ಮಾಳ್ವಾದಲ್ಲಿ ಗೆದ್ದ 34 ಸ್ಥಾನಗಳು ಸರ್ಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದವು.

2017 ಚುನಾವಣೆಯಲ್ಲಿ ಹೀಗಿತ್ತು ಬಲಾಬಲ: 2017ರಲ್ಲಿ ಕಾಂಗ್ರೆಸ್ ಸರ್ಕಾರ ಪಂಜಾಬ್​ನಲ್ಲಿ ಅಧಿಕಾರ ಹಿಡಿದಿತ್ತು. ಹಿಂದಿನ ಬಾರಿ ಅಧಿಕಾರ ಹಿಡಿದಿದ್ದ ಶಿರೋಮಣಿ ಧೂಳೀಪಟವಾಗಿತ್ತು. ಮಾಳ್ವದಲ್ಲಿ ಕಾಂಗ್ರೆಸ್ 40, ಶಿರೋಮಣಿ ಅಕಾಲಿದಳ 8, ಬಿಜೆಪಿ 1 ಗೆದ್ದಿದ್ದು, ಹೊಸದಾಗಿ ಬಂದಿದ್ದ ಆಮ್ ಆದ್ಮಿ ಪಕ್ಷ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮಾಜಾದಲ್ಲಿ ಕಾಂಗ್ರೆಸ್ 2 ಸ್ಥಾನ, ಬಿಜೆಪಿ 1 ಸ್ಥಾನ, ಶಿರೋಮಣಿ ಅಕಾಲಿದಳ 2 ಸ್ಥಾನಗಳನ್ನು ಗೆದ್ದಿದ್ದು, ಉಳಿದ ಸ್ಥಾನಗಳು ಬೇರೆಯವರ ಪಾಲಾಗಿದ್ದವು.

ದೋಬಾದಲ್ಲಿ ಕಾಂಗ್ರೆಸ್ 15 ಸ್ಥಾನ, ಆಮ್ ಆದ್ಮಿ ಪಕ್ಷ 2 ಸ್ಥಾನ, ಬಿಜೆಪಿ 1 ಸ್ಥಾನ ಮತ್ತು ಶಿರೋಮಣಿ ಅಕಾಲಿದಳ 5 ಸ್ಥಾನಗಳನ್ನು ಜಯಭೇರಿ ಬಾರಿಸಿದ್ದವು. ಈ ಬಾರಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.

ಇನ್ನೂ ಹಿಂದುಳಿದಿದೆ ಮಾಳ್ವ: ರಾಜಕೀಯ ಅಧಿಕಾರದ ಚುಕ್ಕಾಣಿ ವಿಚಾರದಲ್ಲಿ ನಿರ್ಣಾಯಕವಾಗಿರುವ ಮಾಳ್ವದಲ್ಲಿ ದೋಬಾ ಮತ್ತು ಮಾಜಾ ಪ್ರಾಂತ್ಯಗಳಲ್ಲಿ ನಡೆದಿರುವಷ್ಟು ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮಾಳ್ವಾದಲ್ಲಿ ಸಾಕ್ಷರತೆ ಪ್ರಮಾಣ ಮತ್ತು ಲಿಂಗಾನುಪಾತ ಅತ್ಯಂತ ಕಡಿಮೆ ಇದೆ. ಮಾಳ್ವಾದಲ್ಲಿ ಶೇಕಡಾ 72.3, ದೋಬಾದಲ್ಲಿ ಶೇಕಡಾ 81.48 ಮತ್ತು ಮಾಜಾದಲ್ಲಿ ಶೇಕಡಾ 75.9 ಸಾಕ್ಷರತೆಯಿದೆ. ಅಂದರೆ ಮಾಳ್ವಾದಲ್ಲಿ ವಾಸಿಸುವ ಜನರು ದೋಬಾ ಮತ್ತು ಮಾಜಾಗಿಂತ ಕಡಿಮೆ ವಿದ್ಯಾವಂತರಾಗಿದ್ದಾರೆ.

ಲಿಂಗಾನುಪಾತ ವಿಚಾರಕ್ಕೆ ಬರುವುದಾದರೆ, ಇಲ್ಲಿಯೂ ಕೂಡಾ ಮಹಿಳೆಯರು ಮತ್ತು ಪುರುಷರಲ್ಲಿರುವ ಅನುಪಾತದ ಅಂತರ ಹೆಚ್ಚಾಗಿದೆ. ಇದರ ಜೊತೆಗೆ ರೈತರ ಆತ್ಮಹತ್ಯೆ, ಕ್ಯಾನ್ಸರ್ ರೋಗ, ಕುಡಿಯುವ ನೀರಿನ ಕೊರತೆ, ಮರಳು ಬೆಲೆ ಏರಿಕೆ, ಹತ್ತಿ ಬೆಳೆಗೆ ಕೆಂಪು ಮಿಡತೆ ಹಾವಳಿ, ನಿರುದ್ಯೋಗ, ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಮಾಳ್ವ ಪ್ರದೇಶವನ್ನು ಮತ್ತಷ್ಟು ಬಡತನಕ್ಕೆ ತಳ್ಳಿವೆ.

ಅತಿ ಹೆಚ್ಚು ಸಿಎಂಗಳು ಆಯ್ಕೆಯಾಗಿರುವುದು ಇಲ್ಲಿಂದಲೇ: ಪಂಜಾಬ್ ರಚನೆಯಾದಾಗಿನಿಂದ ಅತ್ಯಂತ ಹೆಚ್ಚು ಮುಖ್ಯಮಂತ್ರಿಗಳು ಆಯ್ಕೆಯಾಗಿರುವುದು ಮಾಳ್ವ ಪ್ರಾಂತ್ಯದಿಂದಲೇ. ಆದರೂ ಈ ಪ್ರಾಂತ್ಯ ಇನ್ನೂ ಅಭಿವೃದ್ಧಿಯಾಗಿಲ್ಲ. ಧರ್ಮದ ವಿಚಾರದಲ್ಲಿ ಅಕಾಲಿದಳ ರಾಜಕೀಯ ಮಾಡಿದರೆ, ದಲಿತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿತ್ತು ಎಂದು ಮಾಹಿತಿ ಇಲಾಖೆಯ ಮಾಜಿ ಆಯುಕ್ತ ಚಂದ್ರಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್‌ನ ಮಾಳ್ವ ಪ್ರದೇಶದಲ್ಲಿನ ಹೆಚ್ಚು ಮಂದಿ ಕೃಷಿಯನ್ನೇ ಆಧಾರವಾಗಿಸಿಕೊಂಡಿದ್ದಾರೆ. ಆದರೆ, ಯಾವುದೇ ರಾಜಕೀಯ ಪಕ್ಷಗಳು ಈ ಭಾಗದ ಕೃಷಿ ಪ್ರಗತಿಗೆ ಗಮನ ಹರಿಸಿಲ್ಲ. '1998ರಲ್ಲಿ, ಪ್ರಕಾಶ್ ಸಿಂಗ್ ಬಾದಲ್ ಅವರು ಬಟಿಂಡಾ ಜಿಲ್ಲೆಯ ಫುಲೋಖಾರಿಯಲ್ಲಿ ಕೃಷಿ ಸಂಸ್ಕರಣಾಗಾರ ಯೋಜನೆಯನ್ನು ಉದ್ಘಾಟಿಸಿದ್ದರು. ಆದರೆ, ಈ ಯೋಜನೆಯಿಂದ ಅಷ್ಟೇನೂ ಬದಲಾವಣೆಯಾಗಿಲ್ಲ ಎನ್ನುತ್ತಾರೆ ಚಂದ್ರಪ್ರಕಾಶ್.

ಮಾಳ್ವದ ಜನರ ಆಕ್ರೋಶ: ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಶೂನ್ಯ ಎಂದೇ ಇಲ್ಲಿನ ಜನರು ಭಾವಿಸುತ್ತಾರೆ. ಈಗ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕವಾಗಿ ತಮ್ಮನ್ನು ಆಳಿದ ಪಕ್ಷಗಳನ್ನು ಹಳ್ಳಿಗಳಲ್ಲಿ ಜನರು ಬಹಿಷ್ಕರಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಗ್ರಾಮಗಳಿಗೆ ಬರಬಾರದು ಎಂಬ ಫಲಕಗಳನ್ನು ಜನರು ಹಳ್ಳಿಗಳಲ್ಲಿ ಹಾಕಿದ್ದಾರೆ ಎಂದು ವರದಿಗಳಾಗಿವೆ. ಈ ವೇಳೆ ಹೊಸ ಹುರುಪು, ಭರವಸೆ ನೀಡುವ ಪಕ್ಷಗಳಿಗೆ ಅಲ್ಲಿನ ಜನತೆ ಎದುರು ನೋಡುತ್ತಿದ್ದಾರೆ ಎಂದು ರಾಜಕೀಯ ತಜ್ಞರು ಹೇಳುವ ಮಾತು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರೈತ ಸಂಘಟನೆಗಳ ಪ್ರಾಮುಖ್ಯತೆ: ಮಾಳ್ವದಲ್ಲಿ ಅತ್ಯಂತ ಹೆಚ್ಚು ರಾಜಕೀಯ ಪಕ್ಷಗಳಿವೆ. ಇವುಗಳು ವೋಟ್​ ಬ್ಯಾಂಕ್ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರುತ್ತವೆ. ಇದರದಲ್ಲಿ ಉಗ್ರಹಾನ್ ಪ್ರದೇಶದ ಭಾರತಿ ಕಿಸಾನ್ ಯೂನಿಯನ್ ಏಕತಾ, ಸಿಧುಪುರದ ಭಾರತಿ ಕಿಸಾನ್ ಯೂನಿಯನ್ ಪ್ರಮುಖವಾಗಿವೆ. ಸಿಖ್​​ ಯೂನಿಯನ್​​ಗಳು ಗ್ರಾಮ ಮಟ್ಟದಲ್ಲಿ ಸಾಕಷ್ಟು ಪ್ರಬಲವಾಗಿದ್ದು, ಇವೂ ಚುನಾವಣೆಯಲ್ಲಿ ಸಾಕಷ್ಟು ಪ್ರಭಾವ ಬೀರಲಿವೆ ಎನ್ನಲಾಗುತ್ತಿದೆ.

ಡೇರಾ ಸಚ್ಚಾ ಸೌಧ ಕೂಡಾ ಇಲ್ಲಿ ವೋಟ್​ ಬ್ಯಾಂಕ್​​: ಮಾಳ್ವದಲ್ಲಿ ಗುರ್ಮಿತ್ ರಾಮ್ ರಹೀಮ್ ಅವರ ಡೇರಾದಲ್ಲಿ ಸಚ್ಚಾ ಸೌದಾ ಸಾಕಷ್ಟು ಪ್ರಭಾವವನ್ನು ಹೊಂದಿದೆ. ಪ್ರತಿ ಚುನಾವಣೆಯಲ್ಲಿ ಡೇರಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದೇ ರಾಜಕೀಯ ಪಕ್ಷವನ್ನು ಬೆಂಬಲಿಸುವಂತೆ ಡೇರಾ ಸಚ್ಚಾ ಸೌಧ ತನ್ನ ಅನುಯಾಯಿಗಳಿಗೆ ಸೂಚನೆ ನೀಡುತ್ತಿರುತ್ತದೆ. ಡೇರಾಗೆ ರಾಜಕೀಯ ವ್ಯಕ್ತಿಗಳು ಬಂದು ಹೋಗುವುದೂ ನಡೆಯುತ್ತಿರುತ್ತದೆ. ಇತ್ತೀಚೆಗಷ್ಟೇ ಡೇರಾ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಸಲುವಾಗಿ ದೊಡ್ಡ ಸಮಾರಂಭವನ್ನು ಆಯೋಜನೆ ಮಾಡಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾಳ್ವಾ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದ್ದು, ಈ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸುವ ಪಕ್ಷ ಅನಾಯಾಸವಾಗಿ ಅಧಿಕಾರಕ್ಕೆ ಏರುವುದು ಖಚಿತ. ಅಭಿವೃದ್ಧಿಯ ಕೊರತೆ ಮತ್ತು ಇತರ ಸಮಸ್ಯೆಗಳನ್ನು ಅರಿತು ರಾಜಕೀಯ ಪಕ್ಷಗಳು ಇಲ್ಲಿನ ಜನರನ್ನು ಮನವೊಲಿಸಿದರೆ, ಅಂಥಹ ಪಕ್ಷ ಪಂಜಾಬ್ ಅಧಿಕಾರ ಹಿಡಿಯುವುದು ಶತಸಿದ್ಧ.

ಇದನ್ನೂ ಓದಿ: 'ಕೈ' ವಿರುದ್ಧ ತೊಡೆತಟ್ಟಿದ ಪಂಜಾಬ್​ ಸಿಎಂ ಸಹೋದರ: ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

Last Updated :Jan 29, 2022, 9:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.