ಸೆಂಟ್ರಲ್​ ಜೈಲಿನಲ್ಲಿ ದೂರ ಶಿಕ್ಷಣದ ಮೂಲಕ ಮಾಸ್ಟರ್​​ ಡಿಗ್ರಿ : ಚಿನ್ನದ ಪದಕ ಗಿಟ್ಟಿಸಿಕೊಂಡ ಕೈದಿಗಳು

author img

By

Published : Aug 6, 2022, 9:46 PM IST

Gold medals for Kadapa Jail prisioners

ಕಡಪದ ಸೆಂಟ್ರಲ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೂ ಇಬ್ಬರು ಕೈದಿಗಳು ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯ ಮೂಲಕ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಕಡಪ (ಆಂಧ್ರಪ್ರದೇಶ): ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಆಂಧ್ರ ಪ್ರದೇಶದ ಇಬ್ಬರು ಕೈದಿಗಳು ದೂರ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕೈದಿಗಳಾದ ಸುರೇಶ್ ರೆಡ್ಡಿ ಹಾಗೂ ರಮೇಶ್​ ಬಾಬು ಎಂಬುವವರೇ ಜೈಲಿನಲ್ಲಿ ಇದ್ದುಕೊಂಡೇ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ.

ಸುರೇಶ್​ ರೆಡ್ಡಿ ಮತ್ತು ರಮೇಶ್​ ಬಾಬು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಕಡಪ ಸೆಂಟ್ರಲ್​ ಜೈಲು ಸೇರಿದ್ದರು. ಪದವೀಧರರಾಗಿದ್ದ ಈ ಇಬ್ಬರು ಕೂಡ ಜೈಲು ಪಾಲಾದ ಮೇಲೂ ಓದುವ ಇಚ್ಛೆ ಹೊಂದಿದ್ದರು. ಅಂತೆಯೇ, ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಜೈಲಾಧಿಕಾರಿಗಳು ಅನುಮತಿಸಿದ್ದರು. ಇದೀಗ ಎರಡು ವರ್ಷಗಳ ಪಿಜಿ ಮುಗಿಸಿರುವ ಇಬ್ಬರು ಕೂಡ ಉತ್ತಮ ಅಂಕಗಳೊಂದಿಗೆ ಪಾಸ್​​ ಆಗಿರುವುದು ಮಾತ್ರವಲ್ಲದೇ ಚಿನ್ನದ ಪದಕ ಕೂಡ ಗಿಟ್ಟಿಸಿಕೊಂಡಿದ್ದಾರೆ.

Kadapa Jail
ಕಡಪ ಸೆಂಟ್ರಲ್​ ಜೈಲು

ರಮೇಶ್ ಬಾಬುಗೆ 1,000ಕ್ಕೆ 767 ಅಂಕ: ವೈಎಸ್​ಆರ್ ಜಿಲ್ಲೆ ಚೆನ್ನೂರಿನ ರಮೇಶ್ ಬಾಬು 2017ರಲ್ಲಿ ಕೊಲೆ ಪ್ರಕರಣದಲ್ಲಿ ಕಡಪ ಸೆಂಟ್ರಲ್​ ಜೈಲು ಸೇರಿದ್ದರು. ಪದವೀಧರನಾಗಿದ್ದ ರಮೇಶ್ ಬಾಬು ಜೈಲಿಗೆ ಬಂದ ಮೇಲೆ ಸುಮ್ಮನಿರಲು ಮನಸ್ಸಾಗದ ಕಾರಣ ಜೈಲಿನಲ್ಲಿ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಸ್ನಾತಕೋತ್ತರ ಪದವಿ ಓದು ಆರಂಭಿಸಿದ್ದರು. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ರಮೇಶ್ ಬಾಬು 1,000ಕ್ಕೆ 767 ಅಂಕ ಪಡೆದಿದ್ದಾರೆ. ಆದ್ದರಿಂದ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯ ಚಿನ್ನದ ಪದಕ ಘೋಷಿಸಿದೆ.

ಸುರೇಶ್ ರೆಡ್ಡಿಗೆ 1,000ಕ್ಕೆ 738 ಅಂಕ: ಅನಂತಪುರ ಜಿಲ್ಲೆಯ ಧರ್ಮಾವರಂನ ಸುರೇಶ್ ರೆಡ್ಡಿ 2018ರಲ್ಲಿ ಕೊಲೆ ಪ್ರಕರಣದಲ್ಲಿ ಕಡಪ ಕೇಂದ್ರ ಕಾರಾಗೃಹವನ್ನು ಸೇರಿದ್ದರು. ಜೈಲಿಗೆ ಬರುವ ಮುನ್ನ ಡಿಗ್ರಿ ಮುಗಿಸಿದ್ದ ಈತನಿಗೂ ಜೈಲಿಗೆ ಬಂದ ಮೇಲೆ ಓದುವ ಆಸೆ ಇತ್ತು. ಹೀಗಾಗಿ ಜೈಲಿನಲ್ಲಿ ದೂರ ಶಿಕ್ಷಣದ ಮೂಲಕ ಸಮಾಜಶಾಸ್ತ್ರ ಪದವಿ ತೆಗೆದುಕೊಂಡಿದ್ದರು. ಈಗ ಸುರೇಶ್​ ಪರೀಕ್ಷೆಗಳಲ್ಲಿ 1,000ಕ್ಕೆ 738 ಅಂಕ ಗಳಿಸಿದ್ದು, ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯವು ಚಿನ್ನದ ಪದಕ ಪ್ರಕಟಿಸಿದೆ.

ಚಿನ್ನದ ಪದಕ ಸ್ವೀಕರಿಸಲು ರಮೇಶ್ ಬಾಬು ಹೈದರಾಬಾದ್​​​ಗೆ ತೆರಳಬೇಕು. ಆದರೆ, ಜೈಲಿನ ಅಧಿಕಾರಿಗಳು ಅನುಮತಿ ನೀಡದ ಕಾರಣ ಅವರಿಗೆ ಹೈದರಾಬಾಗ್​​ಗೆ ತೆರಳಲು ಸಾಧ್ಯವಾಗಿಲ್ಲ ಎನ್ನಲಾಗ್ತಿದೆ. ಇತ್ತ, ಸುರೇಶ್ ರೆಡ್ಡಿ ಹೈದರಾಬಾದ್‌ಗೆ ತೆರಳಿ ಪದಕ ಸ್ವೀಕರಿಸಲಿದ್ದಾರೆ. ಜೈಲಿನ ಕೈದಿಗಳಿಗೆ ಚಿನ್ನದ ಪದಕ ಸಿಕ್ಕಿರುವುದಕ್ಕೆ ಜೈಲು ಅಧಿಕಾರಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ವಿದ್ಯಾರ್ಥಿಗೆ 1.30 ಕೋಟಿ ರೂ. ವಿದ್ಯಾರ್ಥಿವೇತನ: ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ಬಂಪರ್ ಆಫರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.