UP Polls: ನಾಲ್ಕನೇ ಹಂತದ ಚುನಾವಣೆಯಲ್ಲಿ ಹೀಗಿದೆ ರಾಜಕೀಯ ಲೆಕ್ಕಾಚಾರ

author img

By

Published : Feb 23, 2022, 4:54 PM IST

Updated : Feb 23, 2022, 6:54 PM IST

Fourth phase in UP gets a sprinkling of terror jibe as farmers nurse their wounds

ಉತ್ತರ ಪ್ರದೇಶದ ಚುನಾವಣೆ ಎಲ್ಲಾ ರಾಜ್ಯಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದು, ಇಂದು ನಾಲ್ಕನೇ ಹಂತದ ಮತದಾನ ನಡೆದಿದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ಮತದಾನ ನಡೆಯುವ ಜಿಲ್ಲೆಗಳಲ್ಲಿ ಇರುವ ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಹಿರಿಯ ಪತ್ರಕರ್ತರಾದ ಅತುಲ್ ಚಂದ್ರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ದೇಶದ ಗಮನವೆಲ್ಲಾ ಈಗ ನಡೆಯುತ್ತಿರುವ ಪಂಚರಾಜ್ಯ ಚುನಾವಣೆ ಮೇಲಿದೆ. ಅದರಲ್ಲೂ ಉತ್ತರ ಪ್ರದೇಶ ಪಂಚರಾಜ್ಯಗಳಲ್ಲೇ ಕೇಂದ್ರಬಿಂದು. ಇಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ರೋಹಿಲ್‌ಖಂಡ್‌ ಪ್ರದೇಶ ಒಂಬತ್ತು ಜಿಲ್ಲೆಗಳು, ತೆರೈ ಬೆಲ್ಟ್ ಮತ್ತು ಅವಧ್ ಪ್ರದೇಶದ 59 ಅಸೆಂಬ್ಲಿ ಸ್ಥಾನಗಳಿಗೆ ಮತದಾನ ಜರುಗುತ್ತಿದೆ. ಇದರಲ್ಲಿ ಅತ್ಯಂತ ಪ್ರಮುಖ ಎಂದರೆ ಅವಧ್​​ನಲ್ಲಿ ಬರುವ ಉತ್ತರ ಪ್ರದೇಶದ ರಾಜಧಾನಿಯಾಗಿರುವ ಲಖನೌ ಮತ್ತು ರಾಯ್ ಬರೇಲಿ. ಕಾಂಗ್ರೆಸ್​ನಿಂದ ಹೊರಬಂದ ಅದಿತಿ ಸಿಂಗ್ ಅವರು ರಾಯ್ ಬರೇಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿದ್ದಾರೆ.

ರಾಯಬರೇಲಿಯಲ್ಲಿ ಒಟ್ಟು ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಯಾವ ಕ್ಷೇತ್ರದಲ್ಲೂ ಗೆಲ್ಲುವ ನಿರೀಕ್ಷೆಯಿಲ್ಲ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಏಕಾಂಗಿಯಾಗಿ ಕಾಂಗ್ರೆಸ್​ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ಗೆಲುವು ಅಸಾಧ್ಯ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಅಪಾಯದಲ್ಲಿದೆ.

ಭಯೋತ್ಪಾದನೆ ಜೊತೆ ಎಸ್​ಪಿ ನಂಟಿನ ಆರೋಪ : ನಾಲ್ಕನೇ ಹಂತದ ಚುನಾವಣೆಯಲ್ಲಿ ಪಕ್ಷಗಳು ಪ್ರಚಾರ ನಡೆಸಲು ಸೋಮವಾರ ಕೊನೆಯ ದಿನವಾಗಿತ್ತು. ಈ ವೇಳೆ ಎಲ್ಲಾ ಪಕ್ಷಗಳು ಮತದಾರರನ್ನು ಓಲೈಸಿಕೊಳ್ಳಲು ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದ್ದವು. ಬಿಜೆಪಿ ಪರವಾಗಿ ಕೇಂದ್ರ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಪರವಾಗಿ ಅಖಿಲೇಶ್ ಯಾದವ್, ಕಾಂಗ್ರೆಸ್​ ಪರವಾಗಿ ಪ್ರಿಯಾಂಕಾ ಗಾಂಧಿ, ಆಮ್​ ಆದ್ಮಿ ಪಕ್ಷದ ಪರವಾಗಿ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕ್ರಮಗಳನ್ನು ನಡೆಸಿ, ಮತದಾರರ ಓಲೈಕೆ ಮಾಡಿದ್ದರು.

ಇದಕ್ಕೂ ಮೊದಲೇ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಆಗಮಿಸಿ, ಹರ್ದೋಯಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸಮಾಜವಾದಿ ಪಕ್ಷವನ್ನು ಟೀಕಿಸಿದ್ದರು. 2008ರ ಅಹಮದಾಬಾದ್​ ಸರಣಿ ಸ್ಫೋಟದಲ್ಲಿ ಭಯೋತ್ಪಾದಕರು ಸೈಕಲ್ ಏಕೆ ಬಳಸಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಸಮಾಜವಾದಿ ಪಕ್ಷಕ್ಕೆ ಟಾಂಗ್ ನೀಡಿದ್ದರು.

ಬಿಜೆಪಿಯ ಇತರ ನಾಯಕರಾದ ಜೆ ಪಿ ನಡ್ಡಾ, ಯೋಗಿ ಆದಿತ್ಯನಾಥ್ ಮತ್ತು ಅನುರಾಗ್ ಠಾಕೂರ್ ಅವರು ಸಮಾಜವಾದಿ ಪಕ್ಷ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಮಾಜವಾದಿ ಪಕ್ಷದಿಂದ ಅಪಾಯವಿದೆ ಎಂದಿದ್ದಾರೆ. ಇದರ ಜೊತೆಗೆ ಅಹಮದಾಬಾದ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಓರ್ವನ ತಂದೆ ಅಖಿಲೇಶ್ ಅವರೊಂದಿಗಿರುವ ಹಳೆಯ ಫೋಟೋ ಅನ್ನು ಬಹಿರಂಗಪಡಿಸಿರುವುದು ಸಮಾಜವಾದಿ ಪಕ್ಷಕ್ಕೆ ಭಾರಿ ಪೆಟ್ಟು ನೀಡಲಿದೆ.

'ರಾಷ್ಟ್ರಕ್ಕೆ ಮಾಡಿದ ಅವಮಾನ': ಬಿಜೆಪಿಯವರ ವ್ಯಂಗ್ಯಕ್ಕೆ ಮತ್ತು ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ಮುಖಂಡರು ಸೈಕಲ್​ಗೆ ಮಾಡಿರುವ ಅವಮಾನ, ರಾಷ್ಟ್ರಕ್ಕೆ ಮಾಡಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಲ್ಲದೇ ಅವರೂ ಕೂಡಾ ಬಿಜೆಪಿ ವಿರುದ್ಧ ತೀಕ್ಷ್ಣವಾದ ಆರೋಪಗಳನ್ನು ಮಾಡಿದ್ದರು.

ಪರಿಣಾಮ ಬೀರುತ್ತೆ ಲಖೀಂಪುರ ಘಟನೆ: ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್​ ಕುಮಾರ್ ಮಿಶ್ರಾ ಅವರ ಪುತ್ರ ಅಶಿಶ್ ಮಿಶ್ರಾ ಅವರು ರೈತ ಪ್ರತಿಭಟನಾಕಾರರ ಮೇಲೆ ಕಾರು ಹರಿಸಿದ ಪ್ರಕರಣ ಇನ್ನೂ ಹಸಿಯಾಗಿದೆ. ಆಶಿಶ್ ಬಂಧನದ ನಂತರ ತಣ್ಣಗಾಗಿದ್ದ ಪ್ರಕರಣ, ಆಶಿಶ್ ಜಾಮೀನು ಮೇಲೆ ಹೊರಬಂದ ನಂತರ ಈ ಪ್ರಕರಣ ಭುಗಿಲೆದ್ದಿದೆ. ಈ ಲಖೀಂಪುರ ಖೇರಿ ತರೈ ಪ್ರದೇಶದಲ್ಲಿದ್ದು, ರೈತರು ಯಾವ ಪಕ್ಷಕ್ಕೆ ಒಲವು ತೋರುತ್ತಾರೋ, ಅದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಲಖೀಂಪುರ ಖೇರಿ ಪ್ರಕರಣದಿಂದಾಗಿ ಬಿಜೆಪಿ ಮೇಲೆ ರೈತರಿಗೆ ಸಿಟ್ಟಿದೆ ಎಂಬುದು ಉಲ್ಲೇಖಾರ್ಹ.

ರೋಹಿಲ್​ಖಂಡ ಪ್ರದೇಶದಲ್ಲಿ ಬರೈಲಿ ಮತ್ತು ಫಿಲಿಬಿತ್ ಜಿಲ್ಲೆಗಳು ಕಂಡುಬರುತ್ತವೆ. ಈ ಜಿಲ್ಲೆಗಳಲ್ಲಿ ಕಬ್ಬು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ರೈತರು ಅಸಮಾಧಾನಗೊಂಡಿದ್ದಾರೆ. ಇದೂ ಕೂಡಾ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿದೆ ಎಂದು ಹೇಳಲಾಗುತ್ತಿದೆ. ಸೀತಾಪುರ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ.

ಇದನ್ನೂ ಓದಿ: ಮನಿ ಲಾಂಡ್ರಿಂಗ್​ ಕೇಸ್​: ಎನ್​ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

ಸುನ್ನಿಗಳು ಒಂದೆಡೆ, ಶಿಯಾಗಳು ಮತ್ತೊಂದೆಡೆ : ರಾಜ್ಯದ ರಾಜ್ಯದ ಲಖನೌ ಚುನಾವಣೆಯಲ್ಲಿ ಜಾತಿ ಮತ್ತು ಸಮುದಾಯಗಳು ಪ್ರಮುಖ ಪಾತ್ರ ವಹಿಸಲಿದ್ದು, ಹೋರಾಟವೂ ಕುತೂಹಲಕಾರಿಯಾಗಿದೆ. ಸಮಾಜವಾದಿ ಪಕ್ಷವೂ ಬಲಿಷ್ಟವಾಗುತ್ತಿರುವ ಕಾರಣದಿಂದಾಗಿ ಬಿಜೆಪಿ ಅಷ್ಟೇನೂ ಪ್ರಭಾವ ಬೀರುವುದಿಲ್ಲ ಎನ್ನಲಾಗುತ್ತಿದೆ. ಮುಸ್ಲಿಂ ಸಮುದಾಯದ ಶಿಯಾ ಮತ್ತು ಸುನ್ನಿ ಪಂಗಡಗಳು ಪ್ರತ್ಯೇಕ ರಾಜಕೀಯ ಒಲವು ಹೊಂದಿವೆ. ಶಿಯಾಗಳು ಸಾಂಪ್ರದಾಯಿಕವಾಗಿ ಬಿಜೆಪಿಗೆ ಮತ ಹಾಕಿದರೆ, ಸುನ್ನಿ ಸಮುದಾಯದವರು ಜಾತ್ಯತೀತ ಪಕ್ಷಗಳ ಕಡೆಗೆ ಒಲವು ಹೊಂದಿದ್ದಾರೆ. ಯೋಗಿ ಸರ್ಕಾರವು ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಹತ್ತಿಕ್ಕಿದ ನಂತರ ಶಿಯಾಗಳಲ್ಲಿ ಸಿಎಂ ಬಗ್ಗೆ ಅಸಮಾಧಾನವಿದೆ. ಅದ್ದರಿಂದ ಅವರು ಯಾರಿಗೆ ಮತಹಾಕುತ್ತಾರೆ ಎಂದು ಹೇಳುವುದು ಕಷ್ಟ. ಲಖನೌ ಜಿಲ್ಲೆಯ ಉಳಿದೆಡೆ ದಲಿತರು, ವೈಶ್ಯರು, ಬ್ರಾಹ್ಮಣರು ಪ್ರಬಲರಾಗಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳಲ್ಲೇ ಭಿನ್ನಾಭಿಪ್ರಾಯವನ್ನು ಹೊಂದಿದ್ದ ಕಾರಣದಿಂದ ಮತಗಳ ವಿಭಜನೆಯಾಗಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿ ರೂಪುಗೊಂಡಿತ್ತು. ವಿರೋಧ ಪಕ್ಷಗಳೆಲ್ಲಾ ಉತ್ತರ ಪ್ರದೇಶವನ್ನು ಸ್ವತಂತ್ರವಾಗಿ ಆಳಲು ಬಯಸಿದ ಕಾರಣದಿಂದಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಒಂದು ವೇಳೆ ಒಮ್ಮತಕ್ಕೆ ಬಂದು ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿಯನ್ನು ಖಂಡಿತವಾಗಿ ಸೋಲಿಸಬಹುದಿತ್ತು.

ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಮಾಜವಾದಿ ಪಕ್ಷಕ್ಕೆ ಅಷ್ಟೇನೂ ಉಪಯೋಗಕಾರಿಯಾಗಿ ಇರಲಿಲ್ಲ. ಬಹುಜನ ಸಮಾಜವಾದಿ ಪಕ್ಷವು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿದೆ. ಇದು ಬಿಜೆಪಿಗೆ ದೊಡ್ಡ ಉತ್ತೇಜನವಾಗಲಿದೆ ಎಂದು ಹೇಳಲಾಗುತ್ತಿದೆ.

(Disclaimer: ಈ ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳಾಗಿವೆ. ಈ ಅಭಿಪ್ರಾಯಗಳು ಈಟಿವಿ ಭಾರತ್​ನ ಅಭಿಪ್ರಾಯಗಳನ್ನು ಬಿಂಬಿಸುವುದಿಲ್ಲ)

Last Updated :Feb 23, 2022, 6:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.