'ನನ್ನನ್ನು ಅಪಹರಿಸಿದ್ರು' ಎಂದಿದ್ದ ಶಾಸಕನ ಫೋಟೋ ಬಿಡುಗಡೆ ಮಾಡಿದ ರೆಬೆಲ್ಸ್‌ 'ಸೇನೆ'​!

author img

By

Published : Jun 23, 2022, 5:38 PM IST

Eknath Shinde camp releases pictures of Nitin Deshmukh with other rebel MLAs

ನನ್ನನ್ನು ಅಪಹರಿಸಿ ಸೂರತ್​ಗೆ ಕರೆದುಕೊಂಡು ಹೋಗಲಾಯಿತು ಎಂದಿದ್ದ ಶಿವಸೇನೆ ಶಾಸಕ ನಿತಿನ್​ ದೇಶಮುಖ್ ವಿರುದ್ಧ ಏಕನಾಥ ಶಿಂಧೆ ನೇತೃತ್ವದ ಬಂಡಾಯ ಗುಂಪು ಫೋಟೋ ಅಸ್ತ್ರ ಪ್ರಯೋಗಿಸಿದೆ.

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ದಿನದಿಂದಲೂ ರೋಚಕ ತಿರುವುಗಳೊಂದಿಗೆ ನಾಟಕೀಯ ಬೆಳವಣಿಗೆಗಳೂ ನಡೆಯುತ್ತಿದೆ. ಮಹಾವಿಕಾಸ್​ ಆಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಏಕನಾಥ ಶಿಂದೆ ಗುಂಪು ತಮ್ಮನ್ನು ಅಪಹರಿಸಿ ಸೂರತ್​ಗೆ ಕರೆದೊಯ್ದರು ಎಂದು ಶಿವಸೇನೆಯ ಶಾಸಕ ನಿತಿನ್​ ದೇಶಮುಖ್ ಆರೋಪಿಸಿದ್ದರು. ಆದರೀಗ ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್​ ದೇಶಮುಖ್ ಇರುವ ಫೋಟೋಗಳು ಬಿಡುಗಡೆಯಾಗಿವೆ.

ಶಿವಸೇನೆಯ ಪ್ರಬಲ ನಾಯಕರಾದ ಏಕನಾಥ ಶಿಂದೆ ನೇತೃತ್ವದ ಬಂಡಾಯ ಗುಂಪು ಮುಂಬೈ ಬಿಟ್ಟು ಗುಜರಾತ್​ನ ಸೂರತ್​ಗೆ ಹೋಗಿ ಬೀಡುಬಿಟ್ಟಿತ್ತು. ಆದರೆ, 24 ಗಂಟೆಗಳಲ್ಲಿ ಈ ಗುಂಪಿನಲ್ಲಿದ್ದ ಶಾಸಕರಾದ ಕೈಲಾಸ್​ ಪಾಟೀಲ್​ ಮತ್ತು ನಿತಿನ್​​ ದೇಶಮುಖ್​ ಮುಂಬೈಗೆ ಮರಳಿ ಬಂದಿದ್ದರು.

ನಂತರ ಮುಂಬೈನಲ್ಲಿ ಮಾತನಾಡಿದ್ದ ನಿತಿನ್​​ ದೇಶಮುಖ್, ನನ್ನನ್ನು ಸೋಮವಾರ-ಮಂಗಳವಾರ ನಡುವಿನ ರಾತ್ರಿ ಅಪಹರಿಸಿ ಸೂರತ್‌ನಲ್ಲಿರುವ ಬಂಡಾಯ ಶಾಸಕರ ಗುಂಪಿನ ಜೊತೆ ಸೇರಿಸಿದರು. ನಾನು ಹೋಟೆಲ್​ನಿಂದ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಪ್ಪಿಸಿಕೊಂಡು ಹೊರಬಂದೆ ಎಂದು ಹೇಳಿಕೆ ಕೊಟ್ಟಿದ್ದರು.

ಇದನ್ನೂ ಓದಿ: 'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್​: ದಿಢೀರ್​ ಸಭೆ ಕರೆದ ಕಾಂಗ್ರೆಸ್-ಎನ್​ಸಿಪಿ

ನಿತಿನ್​​ ದೇಶಮುಖ್ ಈ ಹೇಳಿಕೆ ನೀಡಿದ ಮುಂದಿನ 24 ಗಂಟೆಯೊಳಗೆ ಏಕನಾಥ ಶಿಂದೆ ಗುಂಪು ನಿತಿನ್​ ದೇಶಮುಖ್ ವಿರುದ್ಧ ಫೋಟೋ ಆಸ್ತ್ರ ಬಳಸಿದೆ. ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್​ ದೇಶಮುಖ್ ವಿಮಾನ ಏರುವ ಹಾಗೂ ವಿಮಾನದಲ್ಲಿ ಕುಳಿತುಕೊಂಡಿರುವ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ ದೇಶಮುಖ್, ನನ್ನನ್ನು ಬಲವಂತವಾಗಿಯೇ ಸೂರತ್​ಗೆ ಕರೆದುಕೊಂಡು ಹೋಗಲಾಗಿತ್ತು. ನಾನು ತಪ್ಪಿಸಿಕೊಂಡು ಓಡಿ ಬರಲು ಯತ್ನಿಸಿದಾಗ ಸೂರತ್​ ಪೊಲೀಸರು ಹಿಡಿದುಕೊಂಡರು. ನನಗೆ ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ ವೈದ್ಯರು ನನಗೆ ಎದೆನೋವೆಂದು ಹೇಳಿದ್ದರು. ನಮ್ಮ ಮೇಲೆ 300-400 ಪೊಲೀಸರು ಕಣ್ಣಿಟ್ಟಿದ್ದರು ಎಂದು ಪುರುಚ್ಚರಿಸಿದ್ದಾರೆ.

ಅಲ್ಲದೇ, ನಾವು ಸೂರತ್​ಗೆ ತಲುಪಿದ ತಕ್ಷಣವೇ ಸರ್ಕಾರದ ವಿರುದ್ಧ ಪಿತೂರಿ ನಡೆಯುತ್ತಿರುವುದು ನಮ್ಮ ಅರಿವಿಗೆ ಬಂತು. ಹೀಗಾಗಿ ನನಗಿಂತ ಮೊದಲು ಶಾಸಕ ಪ್ರಕಾಶ ಅಬಿತ್ಕರ್ ಬಂಡಾಯ ಗುಂಪಿನಿಂದ ಬೇರ್ಪಡಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಏಕನಾಥ ಬಂಡಾಯ ಗುಂಪಿನಿಂದ ಅಪಹರಣ': ಮುಂಬೈಗೆ ಮರಳಿದ 'ಶಿವಸೈನಿಕರು' ಹೇಳಿದ್ದು ರೋಚಕ ಕಥೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.