ಐದನೇ ದಿನವೂ ರಾಹುಲ್​ ವಿಚಾರಣೆ.. ಇಂದು ಯಾವುದೇ ಸಮನ್ಸ್​ ನೀಡದ ಇಡಿ

author img

By

Published : Jun 22, 2022, 7:06 AM IST

Rahul Gandhi

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಸಂಬಂಧ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ಮೂಲಕ ಐದು ದಿನ 50 ಗಂಟೆಗಳಿಗೂ ಹೆಚ್ಚಿನ ಕಾಲ ವಿಚಾರಣೆ ಮಾಡಲಾಗಿದೆ.

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಮಂಗಳವಾರ 11 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಆದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಹೊಸ ಸಮನ್ಸ್ ನೀಡಿಲ್ಲ. ಹೀಗಾಗಿ, ರಾಹುಲ್ ಅವರ ವಿಚಾರಣೆ ಸದ್ಯಕ್ಕೆ ಮುಕ್ತಾಯವಾದಂತಾಗಿದೆ.

ಕಳೆದ ವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ದಿನಗಳ ವಿಚಾರಣೆಯ ನಂತರ, ಇಡಿ ಸೋಮವಾರ ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಬಳಿಕ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​​ ನೀಡಿ, 11 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್​ 5 ದಿನಗಳಲ್ಲಿ ಒಟ್ಟು 54 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ.

23ರಂದು ವಿಚಾರಣೆಗೆ ಹಾಜರಾಗುತ್ತಾರಾ ಸೋನಿಯಾ ಗಾಂಧಿ: 23 ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ್​ ಜಾರಿಗೊಳಿಸಿದೆ. ಆದರೆ ಕೋವಿಡ್​​ನಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಈಗಷ್ಟೇ ಗಂಗಾರಾಮ್​ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ವೈದ್ಯರು ಸೋನಿಯಾ ಗಾಂಧಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆಯ ವಿಚಾರಣೆಗೆ ಸೋನಿಯಾ ಹಾಜರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಕೋವಿಡ್​ ಹಿನ್ನೆಲೆಯಲ್ಲಿ ಇಡಿ ಸಹ ಅನುಮತಿ ನೀಡಬಹುದು ಎನ್ನಲಾಗಿದೆ.

ಏನಿದು ನ್ಯಾಷನಲ್ ಹೆರಾಲ್ಡ್​ ಪ್ರಕರಣ?: ನ್ಯಾಷನಲ್ ಹೆರಾಲ್ಡ್​ ಎಂಬುದು ಒಂದು ನಿಯತಕಾಲಿಕೆ. 1937ರಲ್ಲಿ ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಅಸೋಸಿಯೇಟೆಡ್ ಜರ್ನಲ್ಸ್​ ಲಿಮಿಟೆಡ್ (ಎಜೆಎಲ್) ಎಂಬ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಈ ಕಂಪನಿಗೆ 5 ಸಾವಿರ ಜನ ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದರು. ನ್ಯಾಷನಲ್ ಹೆರಾಲ್ಡ್​ ಪತ್ರಿಕೆಯು ಇದೇ ಸಂಸ್ಥೆಯಿಂದ ಪ್ರಕಾಶನಗೊಳ್ಳುತ್ತಿತ್ತು. ಈ ಪತ್ರಿಕೆಯನ್ನು ಅಕ್ರಮವಾಗಿ ಬೇರೊಂದು ಸಂಸ್ಥೆಗೆ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯದಲ್ಲಿ 2012 ರಲ್ಲಿ ದಾವೆ ದಾಖಲಿಸಿದ್ದರು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿ ನಿರ್ದೇಶನಾಲಯವು ಈ ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ. ಸುಬ್ರಮಣಿಯನ್ ಸ್ವಾಮಿ ಅವರ ದಾವೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 2014 ರಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿತ್ತು.

ಅದೇ ವರ್ಷದ ಆಗಸ್ಟ್​ನಲ್ಲಿ ಇಡಿ ಅಕ್ರಮ ಹಣ ವರ್ಗಾವಣೆಯ ಪ್ರಕರಣವನ್ನೂ ದಾಖಲಿಸಿತು. ಆದರೆ 2015 ರಲ್ಲಿ ಸೋನಿಯಾ ಹಾಗೂ ರಾಹುಲ್ ಇಬ್ಬರಿಗೂ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಖುದ್ದಾಗಿ ವಿಚಾರಣೆಗೆ ಹಾಜರಾಗುವುದರಿಂದ ಎಲ್ಲ ಆರೋಪಿಗಳಿಗೆ 2016 ರಲ್ಲಿ ಸುಪ್ರೀಂಕೋರ್ಟ್ ವಿನಾಯಿತಿ ನೀಡಿತ್ತು. ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೊಡಾ ಹಾಗೂ ಸುಮನ್ ದುಬೆ ಅವರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಇದನ್ನೂ ಓದಿ: ನಾಲ್ಕು ದಿನಗಳ ಬಿಡುವಿನ ಬಳಿಕೆ ಮತ್ತೆ ಇಡಿ ಮುಂದೆ ರಾಹುಲ್​ ಹಾಜರು ಸಾಧ್ಯತೆ: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.