ದೆಹಲಿ ಅಬಕಾರಿ ನೀತಿ ಹಗರಣ: ಸಚಿವ ಸಿಸೋಡಿಯಾ ಸೇರಿ 13 ಮಂದಿಗೆ ಸಿಬಿಐ ಲುಕ್ ಔಟ್ ನೋಟಿಸ್

author img

By

Published : Aug 21, 2022, 8:19 AM IST

Updated : Aug 21, 2022, 9:28 AM IST

Manish Sisodia

ಅರವಿಂದ್ ಕೇಜ್ರಿವಾಲ್‌ಗೆ ಬಿಜೆಪಿ ಸರ್ಕಾರ ಹೆದರುತ್ತಿದೆ. ಅವರಿಗೆ ನಿಜವಾದ ಸಮಸ್ಯೆ ಭ್ರಷ್ಟಾಚಾರವಲ್ಲ ಬದಲಾಗಿ ಅರವಿಂದ್ ಕೇಜ್ರಿವಾಲ್ ಎಂದು ಮನೀಶ್ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ದೆಹಲಿ ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 13 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಲುಕ್ ಔಟ್ ನೋಟಿಸ್​​ ಹೊರಡಿಸಿದೆ. ಲುಕ್ ಔಟ್ ಸುತ್ತೋಲೆಯು 'ಒಬ್ಬ ವ್ಯಕ್ತಿಯನ್ನು ದೇಶವನ್ನು ತೊರೆಯುವುದನ್ನು ತಡೆಯುತ್ತದೆ ಮತ್ತು ಷರತ್ತನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ವ್ಯಕ್ತಿಯನ್ನು ಬಂಧಿಸಬಹುದು'.

  • आपकी सारी रेड फैल हो गयी, कुछ नहीं मिला, एक पैसे की हेरा फेरी नहीं मिली, अब आपने लुक आउट नोटिस जारी किया है कि मनीष सिसोदिया मिल नहीं रहा। ये क्या नौटंकी है मोदी जी?
    मैं खुलेआम दिल्ली में घूम रहा हूँ, बताइए कहाँ आना है? आपको मैं मिल नहीं रहा?

    — Manish Sisodia (@msisodia) August 21, 2022 " class="align-text-top noRightClick twitterSection" data=" ">

ಏನಿದು ಅಬಕಾರಿ ಹಗರಣ?: ದೆಹಲಿ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ವೇಳೆ 468 ಖಾಸಗಿ ಬಾರ್‌ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಈ ನೀತಿಯ ಜಾರಿಯ ವೇಳೆ ಹಲವಾರು ಅಕ್ರಮಗಳು ನಡೆದಿವೆ ಎಂದು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಕಳೆದ ತಿಂಗಳು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅಲ್ಲದೇ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

ಸಿಬಿಐ ತನಿಖೆಗೆ ಸಚಿವ ಮನೀಶ್ ಸಿಸೋಡಿಯಾ ಕೂಡ ಆಗ್ರಹಿಸಿದ್ದರು. ಮದ್ಯದ ಲೈಸೆನ್ಸ್‌ ಪಡೆದುಕೊಂಡವರಿಗೆ ಟೆಂಡರ್‌ ನಂತರ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಟೆಂಡರ್‌ ಪಡೆದವರಿಗೆ ಕೋವಿಡ್‌ ಕಾರಣ ನೀಡಿ 144.36 ಕೋಟಿ ರೂ. ಶುಲ್ಕ ವಿನಾಯಿತಿ ಕೊಡಲಾಗಿದೆ. ಕಡಿಮೆ ಬಿಡ್‌ ಮಾಡಿದ್ದ ಒಬ್ಬರಿಗೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಎನ್‌ಒಸಿ ಸಿಕ್ಕಿಲ್ಲ ಎಂಬ ಕಾರಣದಿಂದ ಅವರು ನೀಡಿದ್ದ 30 ಕೋಟಿ ರೂ.ಗಳನ್ನು ಮರಳಿಸಲಾಗಿದೆ. ಆದರೆ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬ ಆರೋಪವಿದೆ.

ಬಿಜೆಪಿ ವಿರುದ್ಧ ಸಿಸೋಡಿಯಾ ವಾಗ್ದಾಳಿ: ದೆಹಲಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಎಪಿ ರಾಜಕೀಯ ಬೆಳವಣಿಗೆ ಸಹಿಸದ ಬಿಜೆಪಿ ನಿಯಂತ್ರಣ ಹೇರಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. "ಅವರ ಸಮಸ್ಯೆ ಭ್ರಷ್ಟಾಚಾರವಲ್ಲ, ಅರವಿಂದ್ ಕೇಜ್ರಿವಾಲ್. ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ, ಎಷ್ಟೇ ಪಿತೂರಿ ಮಾಡಿದರೂ 2024ರ ಚುನಾವಣೆ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ ನಡೆಯಲಿದೆ" ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಸಚಿವ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸುಳ್ಳು ಆರೋಪಗಳ ಮೇಲೆ ನನ್ನನ್ನು ಜೈಲಿಗೆ ಹಾಕಲು ಸಂಚು ರೂಪಿಸಲಾಗುತ್ತಿದೆ. ನಮ್ಮ ವಿರುದ್ಧ ಮಾಡಿದ ಯಾವುದೇ ಸುಳ್ಳು ಆರೋಪ ನಿಲ್ಲುವುದಿಲ್ಲ. ದೇವರು ನಮ್ಮೊಂದಿಗಿದ್ದಾನೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಅವರ ಪ್ರತಿಯೊಂದು ಪಿತೂರಿ ವಿಫಲಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

"ದೆಹಲಿ ಅಬಕಾರಿ ಹಗರಣದ ಮುಖ್ಯ ಸೂತ್ರಧಾರ ಕೇಜ್ರಿವಾಲ್": ತಮ್ಮ ಮನೆ ಮೇಲಿನ ಸಿಬಿಐ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಸಚಿವ ಮನೀಶ್‌ ಸಿಸೋಡಿಯಾ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್‌ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿನ ಮದ್ಯ ಹಗರಣದ 'ಕಿಂಗ್‌ಪಿನ್' ಎಂದು ಅನುರಾಗ್ ಠಾಕೂರ್ ಬಣ್ಣಿಸಿದ್ದಾರೆ. ಅಲ್ಲದೇ ಸಚಿವ ಮನೀಶ್‌ ಸಿಸೋಡಿಯಾ ಅವರನ್ನು ಮನಿ..ಶ್​​(ಹಣದಾಹಿ) ಹಾಗೂ ಮದ್ಯ ಹಗರಣದ ಆರೋಪಿ ನಂ.1 ಎಂದು ಕೇಂದ್ರ ಸಚಿವರು ಬಣ್ಣಿಸಿದ್ದಾರೆ.

ಎಎಪಿಯು ಹಲವು ಚುನಾವಣೆಗಳಲ್ಲಿ ಗೆಲ್ಲುವುದಾಗಿ ಹೇಳಿಕೊಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಲ್ಲಲು ಆಗಿಲ್ಲ. ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಖಾತೆ ತೆರೆಯಲು ಎಎಪಿಗೆ ಸಾಧ್ಯವಾಗಲಿಲ್ಲ. ಮೋದಿ ನೇತೃತ್ವದಲ್ಲಿ ಬಿಜೆಪಿಯು 2024ರ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದೆ ಎಂದು ಠಾಕೂರ್ ಹೇಳಿದ್ದಾರೆ.

ಮಿಲ್ಡ್ ಕಾಲ್ ಅಭಿಯಾನ: ಸಿಬಿಐ ದಾಳಿ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಿಲ್ಡ್ ಕಾಲ್ ಅಭಿಯಾನ ಆರಂಭಿಸಿದ್ದಾರೆ. ಭಾರತವನ್ನು ನಂಬರ್ 1 ಮಾಡಲು ರಾಷ್ಟ್ರೀಯ ಮಿಷನ್​​ಗೆ ಕೈ ಜೋಡಿಸಿ, 9510001000 ಎಂಬ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಭಾರತವನ್ನು ಅಗ್ರ ಸ್ಥಾನಕ್ಕೇರಿಸೋಣ ಎಂದು ಕೇಜ್ರಿವಾಲ್ ವಿಡಿಯೋ ಸಂದೇಶ ನೀಡಿದ್ದಾರೆ. ಸಿಬಿಐ ದಾಳಿ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಅವರು ಅವರ ಕೆಲಸ ಮಾಡಲಿ. ನಮಗೆ ಕಿರುಕುಳ ನೀಡಲು ಅವರಿಗೆ ಮೇಲಿನಿಂದ ಆದೇಶ ಬಂದಿರುತ್ತದೆ. ನಮ್ಮ ಒಳ್ಳೆಯ ಕೆಲಸವನ್ನು ಜಗತ್ತೇ ಹೊಗಳುತ್ತಿರುವಾಗ ಕೇಂದ್ರ ಸರ್ಕಾರ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

21 ಕಡೆ ಸಿಸಿಬಿ ದಾಳಿ: ದೆಹಲಿ ಅಬಕಾರಿ ನೀತಿ 2021ರ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ದೆಹಲಿ ಉಪ ಮುಖ್ಯಮಮಂತ್ರಿ ಮನೀಶ್‌ ಸಿಸೋಡಿಯಾ ಮತ್ತು ಐಎಎಸ್ ಅಧಿಕಾರಿ ಅರವ ಗೋಪಿ ಕೃಷ್ಣ ಅವರ ನಿವಾಸಗಳಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಸಿದೆ. ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಮನೀಶ್‌ ಸಿಸೋಡಿಯಾ ಸೇರಿ 15 ಮಂದಿಯನ್ನು ಆರೋಪಿಗಳೆಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಹೆಸರಿಸಿದೆ. ಅಲ್ಲದೆ, ಸಿಸೋಡಿಯಾ ಅವರ ಮನೆ ಮತ್ತು ದೆಹಲಿ-ಎನ್‌ಸಿಆರ್‌ನ ಇತರ 21 ಸ್ಥಳಗಳ ಮೇಲೆ ಕೇಂದ್ರೀಯ ಏಜೆನ್ಸಿ ನಡೆಸಿದ ದಾಳಿಗಳ ಮಧ್ಯೆ ಎಫ್‌ಐಆರ್ ದಾಖಲಾಗಿತ್ತು. ಅವರ ನಿವಾಸದ ಜತೆಗೆ ಉಪಮುಖ್ಯಮಂತ್ ಮನೀಶ್‌ ಸಿಸೋಡಿಯಾ ಅವರ ಕಾರಿನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದರು.

ಎಫ್ಐಆರ್ ದಾಖಲಿಸಿದ ಸಿಬಿಐ: ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು ಅವರು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಹಚರರಿಗೆ 5 ಕೋಟಿ ರೂ ಪಾವತಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ 2021-22ರ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದ ಅಡಿ ಎಫ್‌ಐಆರ್​ ದಾಖಲಿಸಿದೆ. ಮನೀಷ್ ಸಿಸೋಡಿಯಾ ತನಿಖೆಗೆ ಸಹಕರಿಸದಿದ್ದರೆ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಮೀರ್ ಮಹೇಂದ್ರು ಅವರು, ರಾಧಾ ಇಂಡಸ್ಟ್ರೀಸ್‌ನ ಯುಸಿಒ ಬ್ಯಾಂಕ್​ ಖಾತೆ ಸಂಖ್ಯೆ 10220210004647 ಗೆ 1 ಕೋಟಿ ರೂಗಳನ್ನು ಜಮಾ ಮಾಡಿದ್ದಾರೆ. ರಾಧಾ ಇಂಡಸ್ಟ್ರೀಸ್​ನನ್ನು ಮನೀಶ್ ಸಿಸೋಡಿಯಾ ಅವರ ಸಹಚರ ದಿನೇಶ್​ ಅರೋರಾ ಎಂಬುವರು ನಿರ್ವಹಿಸುತ್ತಿದ್ದಾರೆಂದು ಸಿಬಿಐ ಹೇಳಿದೆ.

ಇದನ್ನೂ ಓದಿ: ಪರವಾನಗಿದಾರರಿಗೆ ಅನುಕೂಲವಾಗಲೆಂದೇ ಹೊಸ ಅಬಕಾರಿ ನೀತಿ ಜಾರಿ.. ಸಿಬಿಐ

Last Updated :Aug 21, 2022, 9:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.