ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಕ್ಕೆ ಸಿಕ್ತು ಕಾರಣ!: ತನಿಖಾ ವರದಿಯಿಂದ ಬಹಿರಂಗ

author img

By

Published : Jan 14, 2022, 7:58 PM IST

Updated : Jan 14, 2022, 8:29 PM IST

CDS chopper crash

ತಮಿಳುನಾಡಿನ ನೀಲಗಿರಿಯ ಕೂನೂರು ಎಂಬಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ಪತನದ ತನಿಖೆಯ ವರದಿ ಇಂದು ಸಲ್ಲಿಕೆಯಾಗಿದ್ದು, ಯಾವ ಕಾರಣದಿಂದಾಗಿ ಅಪಘಾತ ಸಂಭವಿಸಿತು ಎಂಬ ಮಾಹಿತಿ ಬಹಿರಂಗಗೊಂಡಿದೆ.

ನವದೆಹಲಿ: ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್‌ ಬಿಪಿನ್​ ರಾವತ್​, ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್​ ದುರಂತದ ತನಿಖಾ ವರದಿ ಇಂದು ಸಲ್ಲಿಕೆಯಾಗಿದ್ದು, ಅಪಘಾತಕ್ಕೆ ದಿಢೀರ್​ ಹವಾಮಾನ ವೈಪರೀತ್ಯವೇ ಕಾರಣ ಎಂದು ವರದಿಯಿಂದ ಬಹಿರಂಗಗೊಂಡಿದೆ.

  • Accident was a result of entry into clouds due to unexpected change in weather... This led to spatial disorientation of the pilot resulting in Controlled Flight into Terrain.Based on its findings, Court of Inquiry has made certain recommendations which are being reviewed: IAF

    — ANI (@ANI) January 14, 2022 " class="align-text-top noRightClick twitterSection" data=" ">

ಡಿಸೆಂಬರ್​​ 8ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಿಂಗ್ಟನ್​​ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ವೇಳೆ ಕೂನೂರು ಎಂಬಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಈ ವೇಳೆ ಹೆಲಿಕಾಪ್ಟರ್​ನಲ್ಲಿದ್ದ ಬಿಪಿನ್​ ರಾವತ್​ ಹಾಗು ಅವರ ಪತ್ನಿ ಮಧುಲಿಕಾ ಸೇರಿದಂತೆ ಹಲವು ಸೇನಾ ಸಿಬ್ಬಂದಿ ವಿಧಿವಶರಾಗಿದ್ದರು. ಗ್ರೂಪ್ ಕ್ಯಾಪ್ಟನ್​​ ವರುಣ್​ ಸಿಂಗ್​ ಚಿಕಿತ್ಸೆ ಫಲಕಾರಿಯಾಗದೇ ವಾರದ ನಂತರ ಬೆಂಗಳೂರಿನಲ್ಲಿ ನಿಧನರಾಗಿದ್ದರು.

ಸೇನಾ ಹೆಲಿಕಾಪ್ಟರ್ ಪತನದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಏರ್ ಮಾರ್ಷಲ್​ ಮನ್ವಿಂದರ್​ ಸಿಂಗ್ ನೇತೃತ್ವದ ತನಿಖಾ ತಂಡ ರಚಿಸಿತ್ತು. ಈ ತಂಡ ಇದೀಗ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಡಿಸೆಂಬರ್​ 9ರಂದು ಬ್ಲಾಕ್ ಬಾಕ್ಸ್​ ವಶಕ್ಕೆ ಪಡೆದುಕೊಂಡು ಅನೇಕ ಆಯಾಮಗಳಿಂದ ತನಿಖೆ, ವಿಚಾರಣೆ ನಡೆಸಿದ್ದು ವಾಯುಪಡೆಯ ಹೆಡ್​​ ಕ್ವಾರ್ಟರ್ಸ್​ಗೆ ವರದಿ ಸಲ್ಲಿಸಿದೆ.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ ಪ್ರಕರಣ: ಮುಂದಿನ ವಾರ ತನಿಖಾ ವರದಿ ಸಲ್ಲಿಕೆ ಸಾಧ್ಯತೆ

ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು:

ಪ್ರಾಥಮಿಕ ತನಿಖೆಯ ಪ್ರಕಾರ, ಅಪಘಾತಕ್ಕೆ ಯಾವುದೇ ತಾಂತ್ರಿಕ ವೈಫಲ್ಯ, ವಿಧ್ವಂಸಕ ಕೃತ್ಯ ಅಥವಾ ನಿರ್ಲಕ್ಷ್ಯ ಕಾರಣವಾಗಿಲ್ಲ. ಹೆಲಿಕಾಪ್ಟರ್​​ ತೆರಳುತ್ತಿದ್ದ ವೇಳೆ ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದಾಗಿಯೇ ಈ ಅವಘಡ ಸಂಭವಿಸಿದೆ. ಹವಾಮಾನದಲ್ಲಿ ಬದಲಾವಣೆಯಾಗುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ಮೋಡಗಳೊಳಗೆ ಪ್ರವೇಶಿಸಿತು. ಇದರಿಂದ ಫೈಲಟ್​​ ವಿಚಲಿತಗೊಂಡಿದ್ದಾರೆ. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ಸೇನಾ ಹೆಲಿಕಾಪ್ಟರ್ ಪತನದ ತನಿಖೆ ನಡೆಸಿರುವ ಮನ್ವಿಂದರ್​​​ ಸಿಂಗ್​ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್​ನ ಕಮಾಂಡಿಂಗ್​​ ಆಫೀಸರ್​​​​ ಆಗಿದ್ದಾರೆ. ಇವರು ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ, ಸಿಂಗ್‌ ಹೆಲಿಕಾಪ್ಟರ್​ ಪೈಲಟ್​​​ ಆಗಿದ್ದು, ವಿಶೇಷ ಅನುಭವ ಹೊಂದಿದ್ದಾರೆ.

Last Updated :Jan 14, 2022, 8:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.