ರಾಜಸ್ಥಾನದಲ್ಲಿ ಎರಡು ದಿನಗಳಿಂದ ಭಾರಿ ಸ್ಫೋಟಕ ಪತ್ತೆ: ನಿನ್ನೆ 186 ಕೆಜಿ ಸ್ಫೋಟಕ, ಇಂದು 500 ಜಿಲೆಟಿನ್ ಕಡ್ಡಿಗಳ ಜಪ್ತಿ

author img

By

Published : Nov 16, 2022, 5:34 PM IST

500-gelatin-sticks-found-in-dungarpur-from-som-river-during-searching

ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿ ಮಂಗಳವಾರ 186 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಬುಧವಾರ ಕೂಡ 500ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ದೊರೆತಿವೆ.

ಡುಂಗರಪುರ (ರಾಜಸ್ಥಾನ): ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿ ಸತತವಾಗಿ ಎರಡು ದಿನಗಳಿಂದ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಇಲ್ಲಿನ ಆಸ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ 186 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಬುಧವಾರ ಕೂಡ 500ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

ನವೆಂಬರ್​ 12ರಂದು ರಾತ್ರಿ ರಾಜಸ್ಥಾನದ ಉದಯ್‌ಪುರದಿಂದ ಗುಜರಾತ್​ನ ಅಹಮದಾಬಾದ್‌ ನಡುವಿನ ಓಡಾ ರೈಲ್ವೆ ಸೇತುವೆ ಸ್ಫೋಟಕ್ಕೆ ಯತ್ನಿಸಲಾಗಿತ್ತು. ಇದಾದ ಮೂರೇ ದಿನಗಳಲ್ಲಿ ಡುಂಗರಪುರ ಜಿಲ್ಲೆಯಲ್ಲಿ ಭಾರಿ ಸ್ಫೋಟಕಗಳು ಪತ್ತೆಯಾಗುತ್ತಿವೆ. ಮಂಗಳವಾರ ಆಸ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಲಿಯಾನ ಗ್ರಾಮದ ಬಳಿಯ ಸೋಮ್ ನದಿಯ ದಡದಲ್ಲಿ 186 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದವು.

ಇದನ್ನೂ ಓದಿ: ಉದಯಪುರ ರೈಲ್ವೆ ಹಳಿಯಲ್ಲಿ ಸ್ಫೋಟ: ಎನ್‌ಐಎ, ಇತರೆ ಸಂಸ್ಥೆಗಳಿಂದ ತನಿಖೆ ಚುರುಕು

ಮಂಗಳವಾರ ಸಂಜೆ ಸ್ಥಳೀಯರು ಭಬರಾನ ಸೇತುವೆಯ ಮೂಲಕ ಹಾದು ಹೋಗುತ್ತಿದ್ದ ಸೋಮ್ ನದಿಯಲ್ಲಿ ಬಿದ್ದಿದ್ದ ಕೆಲ ಪ್ಯಾಕೆಟ್‌​ಗಳನ್ನು ಗಮನಿಸಿದ್ದರು. ನಂತರ ಕೂಡಲೇ ಇವುಗಳ ಬಗ್ಗೆ ಆಸ್ಪುರ ಠಾಣೆಗೆ ಮಾಹಿತಿ ನೀಡಿದ್ದರು. ಅಂತೆಯೇ, ಆಸ್ಪುರ್ ಪೊಲೀಸ್ ಅಧಿಕಾರಿ ಸವಾಯಿ ಸಿಂಗ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

ನೀರಿನಲ್ಲಿ ಎಸೆಯಲಾಗಿದ್ದ 186 ಕೆಜಿ ತೂಕದ ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ಪತ್ತೆ ಹಚ್ಚಿಸಿದ್ದರು. ಆದರೆ, ನೀರಿನಿಂದಾಗಿ ಆ ಸ್ಫೋಟಕಗಳು ಹಾಳಾಗಿದ್ದವು. ನಂತರ ಪೊಲೀಸರು ಏಳು ಚೀಲಗಳಲ್ಲಿ ತುಂಬಿಕೊಂಡು ಠಾಣೆಗೆ ತಂದಿದ್ದರು. ಆದರೆ, ಮಂಗಳವಾರ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹೆಚ್ಚಿನ ತನಿಖೆ ನಡೆಸಿರಲಿಲ್ಲ ಎಂದು ಗೊತ್ತಾಗಿದೆ.

27 ಪ್ಯಾಕೆಟ್‌ಗಳಲ್ಲಿ 500 ಜಿಲೆಟಿನ್ ಕಡ್ಡಿಗಳು ಪತ್ತೆ: ಮಂಗಳವಾರ ಇಷ್ಟೊಂದು ಪ್ರಮಾಣದ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದರಿಂದ ಬುಧವಾರ ಕೇಂದ್ರ ಮತ್ತು ರಾಜ್ಯ ಗುಪ್ತಚರ ತಂಡಗಳು ಆಸ್ಪುರಕ್ಕೆ ಆಗಮಿಸಿ ತನಿಖೆ ಆರಂಭಿಸಿವೆ. ಆಸ್ಪುರ್ ಡಿಎಸ್ಪಿ ಕಮಲ್ ಜಂಗಿದ್, ಪೊಲೀಸ್ ಅಧಿಕಾರಿ ಸವಾಯಿ ಸಿಂಗ್ ಸೇರಿದಂತೆ ತನಿಖಾ ತಂಡಗಳು ಮತ್ತೊಮ್ಮೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಈ ವೇಳೆ ನದಿಯ ದಡದ ಪೊದೆಗಳಲ್ಲಿ ಮತ್ತೆ ಸ್ಫೋಟಕಗಳು ಪತ್ತೆಯಾಗಿವೆ. ಐದು ಬೇರೆ-ಬೇರೆ ಸ್ಥಳಗಳಲ್ಲಿ ಒಟ್ಟಾರೆ 27 ಪ್ಯಾಕೆಟ್‌ಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 500 ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ದೊರೆತಿವೆ. ಇದೇ ವೇಳೆ ಸ್ಥಳೀಯ ಪೊಲೀಸರು ಯಾವುದೇ ಭಯೋತ್ಪಾದಕ ಪಿತೂರಿಯನ್ನು ನಿರಾಕರಿಸುತ್ತಿದ್ದಾರೆ. ಆದರೆ, ಈ ಜಿಲೆಟಿನ್ ಕಡ್ಡಿಗಳು ಅಕ್ರಮ ಗಣಿಗಾರಿಕೆಗೆ ಬಳಕೆ ಮಾಡಲಾಗುತ್ತಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಸದ್ಯ ಉದಯಪುರದ ರೈಲ್ವೆ ಸೇತುವೆಯನ್ನು ಸ್ಫೋಟಿಸುವ ಸಂಚಿನ ಜೊತೆಗೆ ಗುಪ್ತಚರ ತಂಡಗಳು ಹಲವು ಕೋನಗಳಿಂದ ತನಿಖೆ ಆರಂಭಿಸಿವೆ. ಇದರೊಂದಿಗೆ ಇಷ್ಟೊಂದು ಪ್ರಮಾಣದ ಸ್ಫೋಟಕಗಳು ಎಲ್ಲಿಂದ ಬಂದವು ಮತ್ತು ಯಾವ್ಯಾವ ಸ್ಥಳಗಳಿಂದ ಸಂಗ್ರಹ ಮಾಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನವೂ ನಡೆಯುತ್ತಿದೆ.

ಧೋಲ್‌ಪುರ ಸ್ಫೋಟಕ ಕಾರ್ಖಾನೆಯಿಂದ ರವಾನೆ ಶಂಕೆ: ಮಂಗಳವಾರ ಪತ್ತೆಯಾದ ಜಿಲೆಟಿನ್ ಕಡ್ಡಿಗಳು 25 ಮಿಮೀ ಇವೆ. ಈ ಸ್ಫೋಟಕವನ್ನು ಧೋಲ್‌ಪುರ ಸ್ಫೋಟಕ ಮತ್ತು ರಾಸಾಯನಿಕ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಬುಧವಾರ ಪತ್ತೆಯಾದ ಸ್ಫೋಟಕಗಳು ಸಹ ಅದೇ ಕಾರ್ಖಾನೆಯಿಂದ ರವಾನೆ ಮಾಡಿದಂತೆ ಗೋಚರಿಸುತ್ತದೆ. ಆದ್ದರಿಂದ ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಆಸ್ಪುರ್ ಡಿಎಸ್ಪಿ ಕಮಲ್ ಜಂಗಿದ್ ತಿಳಿಸಿದ್ದಾರೆ.

ಗುಜರಾತ್‌ ಎಟಿಎಸ್​ನಿಂದ ಸಾಕ್ಷ್ಯಾಧಾರಗಳ ಸಂಗ್ರಹ: ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ರಾಜಸ್ಥಾನದ ಈ ಡುಂಗರಪುರ ಜಿಲ್ಲೆಯು ಗುಜರಾತ್‌ಗೆ ಸಮೀಪದಲ್ಲಿದೆ. ಉದಯ್‌ಪುರ - ಅಹಮದಾಬಾದ್‌ ರೈಲು ಮಾರ್ಗದ ಸೇತುವೆ ಸ್ಫೋಟಿಸುವ ಸಂಚಿನ ನಂತರ ಡುಂಗರ್‌ಪುರದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದರಿಂದ ಗುಜರಾತ್ ಗುಪ್ತಚರವೂ ಎಚ್ಚರ ವಹಿಸಿದೆ.

ಗುಜರಾತ್‌ ಎಟಿಎಸ್‌ನ ಡಿಎಸ್ಪಿ ಎಸ್‌ಎಲ್‌ ಚೌಧರಿ, ಪಿಐ ನಿಖಿಲ್‌ ಬ್ರಹ್ಮಭಟ್‌ ತಂಡ ಸ್ಥಳಕ್ಕೆ ಆಗಮಿಸಿದೆ. ಅಲ್ಲದೇ, ವಿವಿಧ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ, ವಶಪಡಿಸಿಕೊಂಡ ಸ್ಫೋಟಕ ವಸ್ತುಗಳ ಬಗ್ಗೆಯೂ ಗುಜರಾತ್​ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಗುಜರಾತ್ ಚುನಾವಣೆಯ ದೃಷ್ಟಿಯಿಂದ ಸ್ಫೋಟದ ಸಂಚಿನ ಸಾಧ್ಯತೆ ಸೇರಿದಂತೆ ಹಲವು ಕೋನಗಳಿಂದ ಎಟಿಎಸ್ ತಂಡ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: 13 ದಿನಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ರೈಲು ಮಾರ್ಗದ ಸೇತುವೆ ಸ್ಫೋಟಿಸಲು ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.