ಕರ್ನಾಟಕ

karnataka

ನಾಗಮಂಗಲ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ನಾಲ್ವರು ದುರ್ಮರಣ

By

Published : Jun 4, 2023, 11:28 AM IST

Updated : Jun 4, 2023, 1:32 PM IST

ನಾಗಮಂಗಲ ಬಳಿ ಲಾರಿಗೆ ಕಾರು ಡಿಕ್ಕಿ

ಮಂಡ್ಯ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಟಿ ನರಸೀಪುರ ಬಳಿ ಇತ್ತೀಚೆಗೆ ನಡೆದ ಕಾರು ಬಸ್ ಅಪಘಾತದಲ್ಲಿ 11 ಜನ ಮೃತಪಟ್ಟ ಘಟನೆ ನಡೆದಿತ್ತು.

ನಾಗಮಂಗಲ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಟಿಪ್ಪರ್ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗಮಂಗಲ ತಾಲೂಕಿನ ತಿರುಮಲಾಪುರ ಗ್ರಾಮದ ಬಳಿ ಘಟನೆ ನಡೆಯಿತು.

ನಿಂತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ನಾಲ್ವರೂ ಮೃತಪಟ್ಟಿದ್ದಾರೆ. ಮೃತರನ್ನು ಹೇಮಂತ್, ನವೀನ್, ಶರತ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನ ಹೆಸರು ಗೊತ್ತಾಗಬೇಕಿದೆ. ನಾಗಮಂಗಲದ ಬಿಜಿಎಸ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗಮಂಗಲ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ

ಟಿ.ನರಸೀಪುರ ಬಳಿ ಇತ್ತೀಚೆಗೆ ನಡೆದಿತ್ತು ಭೀಕರ ಅಪಘಾತ: ಮೈಸೂರು ಜಿಲ್ಲೆಯ ಟಿ.ನರಸೀಪುರದ ಕುರುಬೂರು ಗ್ರಾಮದ ಬಳಿ ಮೇ 29 ರಂದು ಖಾಸಗಿ ಬಸ್ ಹಾಗೂ ಇನೋವಾ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ 11 ಜನ ಮೃತಪಟ್ಟಿದ್ದರು. ಅಪಘಾತವಾದ ಸ್ಥಳದಲ್ಲೇ 10 ಜನ ಮತ್ತು ಬಳಿಕ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಓರ್ವ ಮೃತಪಟ್ಟಿದ್ದ. ದುರಂತವೆಂದ್ರೆ ಮೃತ 10 ಜನರು ಮೂರು ಕುಟುಂಬಗಳ ಸದಸ್ಯರಾಗಿದ್ದರು.

ಬಳ್ಳಾರಿ ಮೂಲದ ಮೂರು ಕುಟುಂಬಗಳ 12 ಜನರು ಮೇ 27ರಂದು ಪ್ರವಾಸಕ್ಕೆಂದು ಬಳ್ಳಾರಿಯಿಂದ ಮೈಸೂರಿಗೆ ರೈಲಿನಲ್ಲಿ ತೆರಳಿದ್ದರು. ಮೈಸೂರು ಪ್ರವಾಸದ ಬಳಿಕ ಮೇ 29 ರಂದು ಮಲೆಮಹದೇಶ್ವರ ದರ್ಶನಕ್ಕೆ ತೆರಳಿ ವಾಪಸ್ ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿತ್ತು.

ಇದನ್ನೂ ಓದಿ: ಮೈಸೂರು ಭೀಕರ ಅಪಘಾತ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಸಾವು... ಮೃತರ ಸಂಖ್ಯೆ 11ಕ್ಕೆ ಏರಿಕೆ

ಒಡಿಶಾ ರೈಲು ದುರಂತದಲ್ಲಿ 288 ಜನ ಸಾವು:ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಶುಕ್ರವಾರ ನಡೆದ ತ್ರಿವಳಿ ರೈಲು ದುರಂತದಿಂದ ಸಾವಿನ ಸಂಖ್ಯೆ 288ಕ್ಕೆ ಏರಿದ್ದು, 800 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಭಾರತವಷ್ಟೇ ಅಲ್ಲದೇ ಜಗತ್ತಿನ ಹಲವು ರಾಷ್ಟ್ರಗಳು ಕಂಬನಿ ಮಿಡಿದಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನು ಘಟನಾ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಸಾಗಿದ್ದು, ಬುಧವಾರದೊಳಗೆ ಈ ಮಾರ್ಗದಲ್ಲಿ ಮತ್ತೆ ರೈಲುಗಳು ಓಡಾಡುವ ಸಾಧ್ಯತೆ ಇದೆ.

ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಆಸ್ಪತ್ರೆಗೆ ತೆರೆಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ನರೇಂದ್ರ ಮೋದಿ, ಇದು ದುಃಖದ ಘಟನೆಯಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರವು ಎಲ್ಲ ರೀತಿಯ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಿದೆ. ಹಾಗೆಯೇ ಮೃತರ ಕುಟುಂಬಸ್ಥರ ಜೊತೆ ಸರ್ಕಾರ ಇರಲಿದೆ ಎಂದು ಭರವಸೆ ನೀಡಿದರು. ಜೊತೆಗೆ ದುರಂತ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದು, ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣವೇನು.. ಹೊರಬಿತ್ತು ಪ್ರಾಥಮಿಕ ತನಿಖಾ ಮಾಹಿತಿ

Last Updated :Jun 4, 2023, 1:32 PM IST

ABOUT THE AUTHOR

...view details